ಮಂಗಳವಾರ, ನವೆಂಬರ್ 21, 2017

2_ಕಾಡುವ_ಚಿತ್ರಗಳು

2_ಕಾಡುವ_ಚಿತ್ರಗಳು

ಹಿಂದೆ ಯಾವಾಗಲೋ ಬರೆದ ಸಾಲುಗಳು.
"ಏನೂ ಕಾಣದ, ಎಲ್ಲವೂ ಕಾಣುವ ಖಾಲಿಹಾಳೆಯೇ ಬದುಕು."
ನಾವಂದುಕೊಂಡಂತೆ ಜೀವನ... ಬರೆದಂತೆ ಬದುಕು.

- ಫಣೀಶ್ ದುದ್ದ

1_ಕಾಡುವ_ಸಾಲುಗಳು

1_ಕಾಡುವ_ಸಾಲುಗಳು

ಎಸ್. ಎಲ್ . ಭೈರಪ್ಪರವರ "ಅನ್ವೇಷಣ" ಪುಸ್ತಕದಿಂದ.
"ಸಾವನ್ನು ಅರಿಯುವ ತನಕ‌ ಜೀವನ ಅರ್ಥವಾಗುವುದಿಲ್ಲ. ಬರಿ ಹುಟ್ಟಿದರೆ ಸಾಲದು ಸತ್ತು ಹುಟ್ಟಬೇಕು. ಆಗ ಜೀವನದ ಬೆಲೆ ಅರ್ಥವಾಗುತ್ತದೆ".
ಮುಗಿದರೂ ಮುಗಿಯದ, ಮುಗಿಯದಿದ್ದರೂ ಮುಗಿದ, ಮೊದಲ ಪುಟದಿಂದಲೂ ಮನದೊಳಗೆ ಮೂಡಿದ್ದ ನೂರಾರು ಪ್ರಶ್ನೆಗಳಿಗೆ ಕೊನೆಯಲ್ಲಿ ಉತ್ತರ ನೀಡಿದ, ಆ ಉತ್ತರದಲ್ಲೇ ನೂರಾರು ಪ್ರಶ್ನೆಗಳನ್ನು ಮತ್ತೆ ಮನದೊಳಗೆ ಹುದುಗಿಸಿದ ಅಧ್ಬುತವಾದ ಪುಸ್ತಕ.
ಜೀವನದ ಬಗೆಗಿನ ನೂರಾರು ಪ್ರಶ್ನೆಗಳು, ನೂರಾರು ಉತ್ತರಗಳು. ಯಾವ ಪ್ರಶ್ನೆಗೆ ಯಾವ ಉತ್ತರ ? ಯಾವ ಉತ್ತರಕ್ಕೆ ಯಾವ ಪ್ರಶ್ನೆ?




- ಫಣೀಶ್ ದುದ್ದ

ಗುರುವಾರ, ನವೆಂಬರ್ 16, 2017

1_ಕಾಡುವ_ಚಿತ್ರಗಳು


 1_ಕಾಡುವ_ಚಿತ್ರಗಳು


ಬಿಟ್ಟೂ ಬಿಡದೆ ಕಾಡುತಿರುವ ಚಿತ್ರಗಳು.
ಅಮ್ಮನ ಮಡಿಲು ಬಿಟ್ಟು ಹೊರಬಂದೊಡನೆ ನಾವು ಮೊದಲು ಏರುವುದೇ ಅಪ್ಪನ ಹೆಗಲು.ಅಪ್ಪನ ಹೆಗಲ ಶಕ್ತಿಯೇ ಅಂತಹದ್ದು ತನ್ನ ಪಾಡಿಗೆ ತಾನೇ ಎಲ್ಲವನ್ನು ಕಲಿಸಿಬಿಡುತ್ತದೆ. ನಡೆಯಲು, ಓಡಲು ,ಮಾತನಾಡಲು, ಜೊತೆಗೆ ಬದುಕಲೂ ಕಲಿತು ಬಿಟ್ಟಿರುತ್ತೇವೆ.
ಬದುಕಿನ ವಿವಿಧ ಆಯಾಮಗಳನ್ನು ಅನುಭವಿಸುತ್ತಾ ಒಮ್ಮೊಮ್ಮೆ ಹಿಗ್ಗುತ್ತೇವೆ, ಒಮ್ಮೊಮ್ಮೆ ಕುಗ್ಗುತ್ತೇವೆ, ಸೋಲುತ್ತೇವೆ, ಗೆಲ್ಲುತ್ತೇವೆ,ಅಳುತ್ತೇವೆ, ನಗುತ್ತೇವೆ, ಒಟ್ಟಿನಲ್ಲಿ ಒಂದು ಶಾಶ್ವತ ನೆಮ್ಮದಿಯನ್ನು ಹುಡುಕುತ್ತಲೇ ಇರುತ್ತೆವೆ. ಅದಕ್ಕಾಗಿ ಒಮ್ಮೊಮೆ ಬೆಟ್ಟ ಗುಡ್ಡಗಳನ್ನು ಹತ್ತುತ್ತೇವೆ, ಕಾಡು ಮೇಡುಗಳನ್ನು ಅಲೆಯುತ್ತೇವೆ, ದೇವರಿಲ್ಲದ ಗುಡಿಯೊಳಗೆ ಗಂಟೆಗಟ್ಟಲೆ ಒಬ್ಬೊಂಟಿಯಾಗಿ ಕೂತು ಧ್ಯಾನಿಸುತ್ತೇವೆ, ಬೆಳಕಿಲ್ಲದ ಕೋಣೆಯಲ್ಲಿ ಕುಳಿತು ಒಬ್ಬರೇ ಅತ್ತುಬಿಡುತ್ತೇವೆ.
ಆದರೆ ನಿಜವಾದ ನೆಮ್ಮದಿಯ ಮೂಲವನ್ನೇ ಮರೆತುಬಿಡುತ್ತೇವೆ.
ಅದೇಕೋ ಏನೋ ಈ ಚಿತ್ರ ನೋಡಿದೊಡನೆ ಹಾಗೆನಿಸಿತು, ನಿಜವಾದ ನೆಮ್ಮದಿ ಇರುವುದು ಅಮ್ಮನ ಮಡಿಲಿನಲ್ಲಿ, ಅದೊಂದು ಪುಟ್ಟ ಗುಡಿ, ಅಲ್ಲಿ ದೀಪವಿಲ್ಲ, ಬೆಳಕಿಲ್ಲ, ಅಸಲಿಗೆ ದೇವರೂ ಇಲ್ಲ. ಇರುವುದೊಂದೇ ಪ್ರಶಾಂತ ಧ್ಯಾನ, ಆ ಧ್ಯಾನದಲ್ಲೊಂದು ಸಣ್ಣ ಎದೆಬಡಿತ. ಅದೊಂದೇ ಸಾಕು ನಮ್ಮೆಲ್ಲ ನೋವು, ನಲಿವು, ಪ್ರೀತಿ, ದ್ವೇಷ,ಅಸಹಾಯಕತೆ, ಸಿಟ್ಟು, ಸೆಡವು ಎಲ್ಲವನ್ನೂ ನಿರ್ಲಿಪ್ತಗೊಳಿಸಿ ಮನಸ್ಸಿಗೆ ನೆಮ್ಮದಿಯನ್ನು ನೀಡಲು.

ಒಂದೇ ಮಾತಿನಲ್ಲಿ ಹೇಳಬೇಕೆಂದರೆ,
" ಅಪನೆಂದರೆ ಎಂದೂ ಮುಗಿಯದ ಮೌನ " ಅಷ್ಟೆ , ಆದರೆ ಆ ಮೌನದಲ್ಲೇ ನೂರಾರು ನೋವು , ನಲಿವು,ಬವಣೆ, ಬದುಕು ಎಲ್ಲವೂ ಅಡಗಿದೆ.ಅದೆಂದೂ ಅರ್ಥವಾಗದ ಮೌನ."
"ಅಮ್ಮನೆಂದರೆ ನಿರಂತರ ಧ್ಯಾನ. ಆ ಧ್ಯಾನದಲ್ಲೊಂದು ನಿಶ್ಕಲ್ಮಶ ಪ್ರೀತಿಯಿದೆ,ಮಮತೆಯಿದೆ,ಶಾಂತಿಯಿದೆ,ಎಲ್ಲಕ್ಕೂ ಮೀರಿದೊಂದು ನೆಮ್ಮದಿಯಿದೆ.ಅದೆಂದೂ ಮುಗಿಯದ ಧ್ಯಾನ".
ಅಪ್ಪ ಮೌನ ಸನ್ಯಾಸಿಯಾದರೆ, ಅಮ್ಮ ನಿತ್ಯ ಧ್ಯಾನಸ್ಥೆ.
ಮಿಕ್ಕಿದ್ದೆಲ್ಲವನ್ನೂ ಈ ಚಿತ್ರಗಳೇ ಹೇಳಿಬಿಡುತ್ತವೆ.


- ಫಣೀಶ್ ದುದ್ದ

ಮಂಗಳವಾರ, ನವೆಂಬರ್ 14, 2017

ಕಾಡುವ_ಚೈಲ್ಡ್_ಹುಡ್ಡ್_ಪ್ರಶ್ನೆಗಳು

ಕಾಡುವ_ಚೈಲ್ಡ್_ಹುಡ್ಡ್_ಪ್ರಶ್ನೆಗಳು

ನಮ್ಮೂರಿನ ಜಾತ್ರೆಯ ಕಾರು, ವಾಟರ್ ಗನ್ನು, ಸಣ್ಣದೊಂದು ಫ್ಯಾನು. ಮೈಸೂರು ಎಕ್ಸಿಬಿಷನ್ ನ ವೀಡಿಯೋ ಗೇಮು, ದೆವ್ವದ ಮುಖವಾಡ, ಅಡುಗೆ ಸೆಟ್ಟು. ಮದುವೆ ಮಂಟಪದ ಮುಂದೆ ಮಾರುವ ಬಲೂನು,ಪೀಪಿ,ಗಿರಿಗಿಟ್ಟಲೆ. ಅಪ್ಪನ ಜೇಬಿಗೆ ಕತ್ತರಿ. ಬಾಲ್ಯದ ನೆನಪು.

“ನಮ್ಮೂರ್ ಧರ್ಮನ ಅಂಗಡಿಲಿ 20 ರೂಪಾಯಿಗೆ ಸಿಗುತ್ತೆ , ಇಲ್ಲಿ 50 ರೂಪಾಯಿ ಕೊಟ್ಟು ಯಾಕೆ ವೇಷ್ಟ್ ಮಾಡ್ತಿಯ, ಅಲ್ಲೇ ತೆಕ್ಕೊಡ್ತಿನಿ ಬಾ ", ಅಂತ ಒಂದು ನೂರೈವತ್ತು ಸರ್ತಿ ಹೇಳಿರಬಹುದು.
ಅಷ್ಟಾದರೂ ಪೀಡಿಸಿ ತೆಗೆದುಕೊಂಡ ಆಟಿಕೆಗಳು ಊರಿಗೆ ಬರುವ ತನಕ ಉಳಿದಿದ್ದರೆ ಹೆಚ್ಚು. ಇನ್ನು ಧರ್ಮನ ಅಂಗಡಿ ನೆನಪಲ್ಲೂ ಇರ್ತಿರಲ್ಲಿಲ್ಲ. 
 
ನಿಜಕ್ಕೂ ಆ ಧರ್ಮನ ಅಂಗಡಿ ಇತ್ತಾ ?, ಇದ್ರೂ ಎಲ್ಲಿತ್ತು ? ಈಗಲೂ ಇದ್ಯಾ ..ಇಲ್ಲಾ ಮುಚ್ಚೋಗಿದ್ಯಾ ? .. ಉತ್ತರ ಸಿಕ್ಕದೇ ಉಳಿದ ಚೈಲ್ಡ್ ಹುಡ್ ಪ್ರಶ್ನೆಗಳು.
#_ಹ್ಯಾಪಿ_ಮಕ್ಕಳ_ದಿನಾಚರಣೆ

- ಫಣೀಶ್ ದುದ್ದ

ಬುಧವಾರ, ಸೆಪ್ಟೆಂಬರ್ 20, 2017

ಕವಿತೆ ಹುಟ್ಟುವುದೇನು ?

ಕವಿತೆ ಹುಟ್ಟುವುದೇನು ?

ಎಂದೋ ಅಪರಾತ್ರಿಯಲ್ಲಿ ಕುಳಿತು
ಅರ್ಧಂಬರ್ಧ ಬರೆದ ಕವಿತೆಯ ಸಾಲುಗಳು
ಮತ್ತೆ ಮತ್ತೆ ಪೀಡಿಸುತ್ತಿವೆ
ನಮಗೆ ಮುಕ್ತಿ ಕೊಟ್ಟು ಬಿಡೆಂದು...

 
ಅಟ್ಟದ ಮೇಲೆ ಗೆದ್ದಲು ಹತ್ತಿದ ಪುಸ್ತಕವೊಂದು
ತನ್ನನ್ನು ತಾನೇ ಓದುತ್ತಿದೆ ,
ಮುಗಿಯದ ಕಥೆಯೊಂದನ್ನು
ಮತ್ತೆ ಮತ್ತೆ ನೆನಪಿಸುತ್ತಿದೆ.

 
ಮುನಿದು ಮೂಲೆಯಲಿ ಬಿದ್ದ
ಲೇಖನಿಯ ಶಾಯಿ ಮುಗಿದು
ಅದೆಷ್ಟು ಮಾಸವಾಯಿತೋ ...
ಕವಿತೆ ಹುಟ್ಟಿ ಅದ್ಯಾವ ಕಾಲವಾಯಿತೋ ...

 
ಖಾಲಿಹಾಳೆಯ ಪ್ರೀತಿ ಲೇಖನಿಯ ಕಡೆಗೆ
ಇದ್ದರಲ್ಲವೆ ತಾನೆ ಕವಿತೆ ಹುಟ್ಟುವುದಿಲ್ಲಿ ,
ಶಾಯಿಯಿದ್ದರೆ ಏನು .. ಪ್ರೀತಿ ಇಲ್ಲದ ಮೇಲೆ
ಕನಸು ಅರಳುವುದೇನು ? ಕವಿತೆ ಹುಟ್ಟುವುದೇನು ?

 
-ಫಣೀಶ್ ದುದ್ದ

ನಿನ್ನದೊಂದೇ ನೆನಪು

 ನಿನ್ನದೊಂದೇ ನೆನಪು..
 
ಖಾಲಿ ಹಾಳೆ, ಬಿಳಿಯ ಗೋಡೆ
ಶಾಯಿ ತುಂಬಿದ ಲೇಖನಿ,
ಬಣ್ಣವಂಟಿದ ಕುಂಚ ,
ಕನಸು ಮೂಡುವ ಇರುಳು, 
ಬೆಳಕ ನೀಡುವ ದೀಪ, 
ಅರ್ಥವಿಲ್ಲದ ಬದುಕು,
ನಿನ್ನದೊಂದೇ ನೆನಪು ...

ಕುಂಚ ಬರೆದಾ ಚಿತ್ರ
ಬಿಳಿಯ ಗೋಡೆಯ ಬದುಕು ,
ಖಾಲಿಹಾಳೆಯ ಬದುಕು
ಲೇಖನಿಯ ಕವಿತೆ,
ಕನಸಿನಾ ಇರುಳಿಗೂ
ದೀಪದಾ ಬೆಳಕು.
ನಡುರಾತ್ರಿಯಲ್ಲೂ
ನಿನ್ನದೊಂದೇ ನೆನಪು,

ಗೋಡೆಯಿದ್ದರೆ ಏನು 
ಕುಂಚವಿಲ್ಲದ ಮೇಲೆ,
ದೀಪವಿದ್ದರೆ ಏನು
ಕನಸೇ ಇಲ್ಲದ ಮೇಲೆ,
ಲೇಖನಿಯೇ ಇಲ್ಲದಾ
ಖಾಲಿ ಹಾಳೆಯಾ ಬಾಳು,
ಅರ್ಥವಿಲ್ಲದ ಬದುಕು,
ನಿನ್ನದೊಂದೇ ನೆನಪು ...
 
- ಫಣೀಶ್ ದುದ್ದ

ಕಾಲನ ಚಕ್ರ ಮೆಲ್ಲನೆ ತಿರುಗುತ್ತಿತ್ತು .....


ಕಾಲನ ಚಕ್ರ ಮೆಲ್ಲನೆ ತಿರುಗುತ್ತಿತ್ತು .....
 
ಬಡತನದ ಕುಲುಮೆಗೆ  ಸಿಕ್ಕ ಒಡಲು 
ಬೆಂದು ಬೆವರಿ ಬರಡಾಗಿತ್ತು,
ಕುಲುಮೆಯಲ್ಲೇ ಹುಟ್ಟಿದ ಕಲೆಯೊಂದು
ಮೇಲೆತ್ತುವವರಿಲ್ಲದೆ ಕಮರುತ್ತಿತ್ತು.

ಹಸಿವಿನ ಹೊಟ್ಟೆಗೆ ಹಿಟ್ಟನು ಬೇಡಿ 
ಕಂಡ ಕಂಡವರ ಕಾಲಿಗೆ ಬಿದ್ದಿತ್ತು,
ಕಾಲಲಿ ಒದ್ದ ಕುರುಡು ಕಾಂಚಾಣಕೆ
"ಕಾಲವೆ ಉತ್ತರಿಸಲಿದೆ",ಎಂದಿತ್ತು.  

ಒಡಲಿನ ಕಾವು ನುಡಿಸಿದ ಮಾತು
ಜಗಕೆ ಕಠುವಾಗಿ ಕೇಳಿತ್ತು ,
"ಬದುಕಿ ತೋರಿಸಿ ನೋಡು"ಎಂದು
ಜಗವೇ ಸವಾಲೆಸೆದಿತ್ತು.

ಊದುಕೊಳವೆಯ ಛಲದ ಉಸಿರಿಗೆ
ಕಲೆಯ ಕಿಡಿಯು  ಹೊತ್ತಿತ್ತು ,ಜ್ಯೋತಿ ಬೆಳಗಲು ಹತ್ತಿತು..
ಹಾಗೇ .. ಕಾಲವು ಸರಿದಿತ್ತು ..
ಕಲೆಯು ಬೆಳೆದಿತ್ತು, ಕವಿತೆಯಾಗಿತ್ತು

ಹೊಟ್ಟೆಯ ಹೊರೆಯಲು ಹೊತ್ತಿದ ಕಿಡಿಯು
ಹೊತ್ತಿಗೆಯಾಗಿತ್ತು ,ಜಗದ ಮಸ್ತಕ ಸೇರಿತ್ತು,
ಗೋಡೆಯ ಮೇಲಿನ ಕಾಲನ ಚಕ್ರ
ಮೆಲ್ಲನೆ ತಿರುಗುತ್ತಿತ್ತು ..


-ಫಣೀಶ್ ದುದ್ದ

ಮಂಗಳವಾರ, ಜುಲೈ 4, 2017

ಹೇಗೆ ತಾನೆ ಅರ್ಥವಾದೀತು?

ಹೇಗೆ ತಾನೆ ಅರ್ಥವಾದೀತು?

ನಾಲ್ಕಾರು ಜನರು
ಬೀದಿಯ ಕೊನೆಯ ಮನೆಯ
ಮುಂದೆ ಕೈ ಕಟ್ಟಿ ನಿಂತಿದ್ದಾರೆ,
ಎಂದೂ ಇಲ್ಲದ ಜನರು
ಇಂದೇಕೋ ಅಲ್ಲಿದ್ದಾರೆ.
ಊರ ತುಂಬಾ
ಸಿಡಿಮಿಡಿಯೆನ್ನುತ್ತಿದ್ದ
ಆ ಮನುಷ್ಯನ ಸದ್ದಿಲ್ಲ.
ತೇಟ್ ಭೂತಯ್ಯನ
ಪ್ರತಿರೂಪವೇ...


ಮೂವತ್ತು ವರುಷದ ನಂತರ
ಆ ಮನೆಯ ಮುಂದೆ
ಬೆಂಕಿಯ ನರ್ತನ,
ಬೀದಿಯ ತುಂಬೆಲ್ಲಾ
ಸ್ಮಶಾನ ಮೌನ,
ಅವನ ನೇರ ನುಡಿಗೋ,
ಕಡು ಕೋಪಕ್ಕೋ,
ಊರ ಜನಕೆಲ್ಲ
ಅವನೆಂದರೆ ಸಿಟ್ಟು,
ಒಂಟಿ ಜೀವದ
ಅಂತರಾಳದ ನೋವು
ಹೇಗೆ ತಾನೆ ಅರ್ಥವಾದೀತು.


ಇನ್ನು ಅವನಿಲ್ಲ ,
ಅವನ ಸಿಡಿಮಿಡಿಯಿಲ್ಲ,
ಕಂಬನಿ ಮಿಡಿಯುವವರೂ ಇಲ್ಲ,
ಅದೇಕೋ ಏನೋ
ಅವನು ಸಾಕಿದ ನಾಯಿ ಮಾತ್ರ
ಒಂದೇ ಸಮನೆ
ಅಳುತಲಿದೆ.


- ಫಣೀಶ್ ದುದ್ದ

ಸಾರ್ಥಕತೆಯುಂಟೇ ?

ಸಾರ್ಥಕತೆಯುಂಟೇ ?
 
ಜಗವೆಲ್ಲ ಬೆಳಗುವ ಜ್ಯೋತಿಯ
ಅಂತರಾಳದಲ್ಲೊಂದು ನೋವು ,
ತಾನೇ ಉರಿದು ಜಗವ ಬೆಳಗಿದರೂ
ತನ್ನಡಿಯಲಿ ಮಾತ್ರ ಕಡುಗತ್ತಲೆ,
ಇದೆಂತಹಾ ನ್ಯಾಯ ?
ಕತ್ತಲ ಕೂಪದಂತಾದರೆ 
ಜಗ ಬೆಳಗುವ 
ಜೀವಜ್ಯೋತಿಯ ಮನೆಯು,
ಸಾರ್ಥಕತೆಯುಂಟೇ
ಬೆಳಕಿನಾ ಬದುಕಿಗೆ?
 
- ಫಣೀಶ್ ದುದ್ದ
ಎಲ್ಲಿ ಹೋದೆ ಗೆಳತಿ?

ನೀನಲ್ಲವೇ ಗೆಳತಿ
ಬರಡು ಭೂಮಿಯಾಗಿದ್ದ
ಈ ನನ್ನ ಮನಕೆ
ಒಲವಿನ ಮಳೆ ಬರಿಸಿ,
ಪ್ರೀತಿಯ ಪುಟ್ಟ ಗಿಡ ನೆಟ್ಟು ,
ನಮ್ಮ ಪ್ರೀತಿಯ ಸಂಕೇತವಾಗಿ
ನಮ್ಮ ಮನೆಯಂಗಳದಲ್ಲೊಂದು
ಹೂವಿನ ಗಿಡ ನಿಟ್ಟವಳು ?
ಮತ್ತೇಕೆ ಕವಲು ದಾರಿ
ಹಿಡಿದು ಹೊರಟೆ?

ನೀನೇನೋ ಹೋದೆ,
ನೀ ನೆಟ್ಟ ಗಿಡಗಳ
ಪಾಡು ಏನಾಗಬೇಕು ಹೇಳು ?
ಮನೆಯಂಗಳದ ಗಿಡಕ್ಕೇನೋ
ಮಳೆರಾಯನ ಪ್ರೀತಿಯಿತ್ತು.
ಮನದಂಗಳದ ಗಿಡಕ್ಕೆ ?
ನನ್ನ ಕಣ್ಣೀರು ಸಾಲುತ್ತಿಲ್ಲ.
ಬಿಕ್ಕಿ ಬಿಕ್ಕಿ ಅತ್ತರೂ
ನೀನೇ ಬೇಕೆನ್ನುತಲಿದೆ.

ಮನೆಯಂಗಳದ ಗಿಡ
ಚಿಗುರಿ ಕವಲೊಡೆದು
ದೊಡ್ಡದಾಗಿ,
ಮುದ್ದಾದ ಹೂವೊಂದು
ಅರಳಿ ನಿಂತಿದೆ.
ನೋಡು ಬಾ ಗೆಳತಿ ,
ಮನದಂಗಳದ ಗಿಡಕೂ
ಬದುಕಬೇಕೆಂಬ ಆಸೆ,
ಆದರೆ ನೀನಿರದೆ ಹೇಗೆ?
ಬಂದುಬಿಡು ಗೆಳತಿ.
ಬಂದುಬಿಡು.

- ಫಣೀಶ್ ದುದ್ದ

ಗುರುವಾರ, ಮೇ 11, 2017

ಮನಸ್ಥಿತಿ ..

 ಮನಸ್ಥಿತಿ ..

ಅದೆಷ್ಟು ಸಜ್ಜನಿಕೆ ತುಂಬಿದ್ದರೇನು
ಈ ಜಗದ ಒಡಲೊಳಗೆ?,
ಕೆಲವು ಮನಸ್ಥಿತಿಗಳೇ ಹಾಗೆ,
ಮನುಷ್ಯತ್ವವನ್ನು ಮೂಟೆಕಟ್ಟಿ,
ಆತ್ಮಸಾಕ್ಷಿಯನ್ನು ಆಚೆಗಟ್ಟಿ,
ಮಾಡಬಾರದ್ದನ್ನು ಮಾಡುತ್ತಾ,
ದ್ವೇಷದ ವಿಷ ಕಾರುತ್ತಾ,
ಮೆರೆಯುತ್ತಲೇ ಇರುತ್ತವೆ
ಆ ಮತಿಭ್ರಮಣ ಮನಸ್ಸುಗಳು



-ಫಣೀಶ್ ದುದ್ದ

ಎರಡಕ್ಷರದ ಶಕ್ತಿ

ಎರಡಕ್ಷರದ ಶಕ್ತಿ

ಎರಡಕ್ಷರದ ಶಕ್ತಿ,
ಏನ ಬರೆಯಲಿ ನಾನು
ನಿನ್ನ ಬಗ್ಗೆ ?
ಬರೆದರೆ ಪುಟಗಳೇ ಸಾಲದು,
ಅಸಲಿಗೆ ಈ ಜನುಮವೇ ಸಾಲದು,
ಸಾಧ್ಯವಿಲ್ಲ ತಾಯಿ ನಿನ್ನ ಬಗ್ಗೆ ಹೇಳಲು,
ನಾ ಒಲ್ಲೆ , ನಿನ್ನ ಪದಗಳಲಿ ಬಂದಿಸಲು,
ಹೇಳಬಲ್ಲೆ ನಾನು ಇಷ್ಟು ಮಾತ್ರವೆ ಇಂದು,
ಕುಳಿತರೆ ನನ್ನೆಲ್ಲ ಶಬ್ದಕೋಶದ ಪದಗಳು
ತೂಗು ತಕ್ಕಡಿಯ ಒಂದು ತುದಿಯಲಿ,
ನೀ ಕುಳಿತ ತುದಿಯ ತೂಕವೇ ಏರುವುದು,
ಅಮ್ಮ ಎಂಬ ಪದವೇ
ಸಕಲವನು ಮೀರುವುದು.


 - ಫಣೀಶ್ ದುದ್ದ

ಅನರ್ಥ ಅಪಾರ್ಥ

ಅನರ್ಥ ಅಪಾರ್ಥ

ಪ್ರತ್ಯಕ್ಷವಾಗಿ ನೋಡಿದರೂ
ಪ್ರಾಮಾಣಿಸಿ ನೋಡೆನ್ನುವರು,
ಅನರ್ಥ ಅಪಾರ್ಥಗಳೇ
ಸುಳಿದಾಡುತ್ತಿರುವ
ಈ ಗಲ್ಲಿಯೊಳಗೆ
ಪ್ರಾಮಾಣಿಕತೆಯೆಲ್ಲಿ?
ಮರದಡಿ ಮಜ್ಜಿಗೆ ಕುಡಿದರೂ,
ಹೆಂಡ ಕುಡಿವನೆನ್ನುವರು...
ಮನದಾಳದ ನೋವಿನ ಅಳಲಿಗೂ
ಮೊಸಳೆ ಕಣ್ಣೀರೆನ್ನುವರು..
ಅನರ್ಥ ಅಪಾರ್ಥಗಳೆಂಬ
ಭೂತಗಳ ಕಾಲಡಿಯಲಿ
ಸಿಕ್ಕಿ ಸಾಯುತ್ತಿದೆ
ನಿಯತ್ತೆಂಬ ಬಡ ಜೀವ,
ಎದ್ದು ಬರಬೇಕಿದೆ ಬಿದ್ದ ನಿಯತ್ತು
ಬುದ್ದಿ ಕಲಿಸಲು ಒಮ್ಮೆ
ಈ ಬುದ್ದಿ ಭ್ರಮಣ ಅನರ್ಥಗಳಿಗೆ.


- ಫಣೀಶ್ ದುದ್ದ

ಬಂದುಬಿಡು ನಲ್ಲೆ

ಬಂದುಬಿಡು ನಲ್ಲೆ

ನೋಡಿಯೂ ನೋಡದ ಹಾಗಿದ್ದ
ಆ ನಿನ್ನ ಓರೆಗಣ್ಣ ನೋಟ,
ಕಾಡಿಗೆ ಇಟ್ಟ ಆ ನಿನ್ನ ಕಂಗಳು,
ಕಣ್ಣ ರೆಪ್ಪೆಗೆ ಮುತ್ತಿಡುವ ಮುಂಗುರುಳು,
ಕನಸಲ್ಲೂ ಕಾಡುವ ನಿನ್ನ ಅಂದ ,
ಬಂದುಬಿಡು ನಲ್ಲೆ,
ಕಾಡ ಬೆಳದಿಂಗಳಲ್ಲಿ
ಅವನಂದವೇ ಚಂದ ಎಂದು
ಮೆರೆಯುವ ಚಂದಮಾಮನಿಗೊಮ್ಮೆ
ನಿನ್ನ ತೋರಿಸಬೇಕಿದೆ.

- ಫಣೀಶ್ ದುದ್ದ

ಶ್ರಮ

ಶ್ರಮ

ಶ್ರಮವನ್ನು ಹೀರಿ
ಬೆಳೆದ ಮರ,
ಕೊಡುತಿಹುದು
ಫಲವತೆಯ ಹಣ್ಣು,
ಹಣ್ಣ ತಿಂದವರು
ಕೊಡದಿರಲಿ
ಆ ಮರಕೆ,
ಕೊಡಲಿಯೇಟಿನ ಪೆಟ್ಟು !


- ಫಣೀಶ್ ದುದ್ದ

ಮಂಗಳವಾರ, ಏಪ್ರಿಲ್ 18, 2017

ಕಡಲಾಳದ ಕೂಗು

ಕಡಲಾಳದ ಕೂಗು

ಕಡಲ ಗರ್ಭದ ಕರೆಯ ಕೇಳಿ,
ದೂರದೂರಿಂದ ಬರುವ
ಹುಣ್ಣಿಮೆ ಚಂದಿರ,
ಚಂದಿರನ ಮೊಗವ ಕಂಡೊಡನೆ,
ಹುಚ್ಚೆದ್ದು ಕುಣಿಯುವ ಸಾಗರ ,
ಇದೆಂತಾ ಅಚ್ಚರಿ ..!
ಎಲ್ಲಿಯ ಚಂದಿರ ?
ಎಲ್ಲಿಯ ಸಾಗರ ?
ಕಡಲಾಳದ ಕೂಗು
ಕಾಣದೂರಿನ ಚಂದಿರನ
ತಲುಪುವ ಪರಿಯೇ ಸುಂದರ

- ಫಣೀಶ್ ದುದ್ದ

ಜಂಗಮ - ಸ್ಥಾವರ

ಜಂಗಮ - ಸ್ಥಾವರ

ಈ ಜಗವು ಜಂಗಮವೇ ?
ಈ ಜಗಕ್ಕೆ ಅಳಿವಿಲ್ಲವೇ?
ಜಂಗಮಕ್ಕಳಿವಿಲ್ಲ
ಸ್ಥಾವರಕ್ಕಳಿವುಂಟು
ಎನ್ನುವರು ತಿಳಿದವರು ...
ಈ ಜಗದಂತರಾಳದ
ನಿಲುವನ್ನು ಅರಿಯಲು
ಜೋಗಿ ಜಂಗಮನಂತೆ
ಜಗದಗಲವ ಸಂಚರಿಸುವ
ಸಂಚಾರಿಗಲ್ಲದೆ
ಮತ್ತಿನ್ಯಾರಿಗಾದರೂ
ಸಾಧ್ಯವಿದೆಯೇ ...?

- ಫಣೀಶ್ ದುದ್ದ

ಸೋಮವಾರ, ಏಪ್ರಿಲ್ 3, 2017

ಸಂಭ್ರಮ

ಸಂಭ್ರಮ

ಬಿರುಕುಬಿಟ್ಟ ಬರಡು ಭೂಮಿಯ ಮಧ್ಯೆ,
ಆಕಾಶವನ್ನೇ ದಿಟ್ಟಿಸುತ ಆತಂಕದಿ
ಕೂತಿರುವ ರೈತನ,
ಅಹವಾಲನ್ನು ಕೇಳಲು
ಮಳೆರಾಯನೇ ಧರೆಗಿಳಿಯಲು,
ಬಡ ರೈತನ ಮುಖದಲ್ಲಿ
ಸಂಭ್ರಮವೋ ಸಂಭ್ರಮ.

- ಫಣೀಶ್ ದುದ್ದ

ಆ ತೇರು ...

ಆ ತೇರು ...
 
ಅದೊಂದು ಕಾಲವಿತ್ತು ,
ಉಗಾದಿ ಹಬ್ಬದಾ ಮುನ್ನ
ನಮ್ಮೂರ ತೇರು,
ಊರಿನಾ ತರುಣರೆಲ್ಲ ಸೇರಿ
ಕಟ್ಟುತ್ತಿದ್ದರು ತೇರ ಜೋರು,
ಹಣ್ಣು ಜವನದಾ ಜೋಡಿ
ನವಜೋಡಿ ಕೈಯ್ಯಲ್ಲಿ
ಸಂಭ್ರಮವೋ ಸಂಭ್ರಮ,
ಊರ ಮನೆಮಂದಿಯಲ್ಲಿ

ಈಗಲೂ ನಡೆಯುವುದು
ಊರಿನಾ ಜಾತ್ರೆ,
ಟರ ಟರ ಸದ್ದಿನ
ಟ್ರ್ಯಾಕ್ಟರಿನ ತೇರಲ್ಲಿ,
ಗಾಲಿ ಮುರಿದಾ ತೇರು
ಊರಿನಾ ಮುಂದೆ,
ತಾರುಣ್ಯ ಓಡುತಿದೆ
ನಗರದಾ ಹಿಂದೆ,
ನವಜೋಡಿ ಮರೆತಿದೆ
ಹಣ್ಣು ಜವನದಾ ಹಿಗ್ಗು,
ತೇರಿನಾ ಸಂಭ್ರಮ
ಉಳಿದ ಮುದುಕರಾ ಮುಂದೆ.

- ಫಣೀಶ್ ದುದ್ದ

ಯುಗಾದಿ

ಯುಗಾದಿ
 
ಬೆಲ್ಲದಾ ಜೊತೆಗೂಡಿ ಬೇವಿನಾ ಹೂವು 
ಬಂದು ನಿಂತಿದೆ ಬಾಗಿಲಾ ಬಳಿಗೆ,
ರಂಗೋಲಿ ಬರೆದು,ತೋರಣವ ಕಟ್ಟಿ,
ಬರಮಾಡಿಕೊಳ್ಳಲು ಹೊಸಯುಗದ ಬೆಳಗನ್ನು ,
ವಿಳಂಬಿಸದಿರು ಓ ರವಿಯೆ,
ಕರೆದು ತಾ ನೀ ಬೇಗ,ಕೈಹಿಡಿದು ನಿನ್ನೊಡನೆ
ಹೇವಿಳಂಬಿ ಸಂವತ್ಸರವನು,
ತೋರಿಸಬೇಕಿದೆ ನಮ್ಮ ಮನೆಯ ಮಾವಿನಾ ಚಿಗುರನು.
 
-ಫಣೀಶ್ ದುದ್ದ

ಸೋಮವಾರ, ಮಾರ್ಚ್ 27, 2017

ಬೋಂಡ

ಬೋಂಡ...

ಜಗವೆಂಬುದು ಉಪ್ಪು ಖಾರ ಬೆರೆತ
ಕಡಲೆಹಿಟ್ಟಿನ್ನು ಕಲಸಿದಾ ರಸಪಾಕ
ಮೈಸೀಳಿ ಬಿದ್ದರೆ ಮೆಣಸಿನಾ ಕಾಯಂತೆ
ಈ ಜಗದ ಮಜಲೊಳಗೆ
ಎಣ್ಣೆಯಾ ಕಾವನ್ನು ಸಹಿಸುತಾ ಸುಮ್ಮನೆ
ಬೆದರದೇ ಬೆಂದರೆ ಕಷ್ಟಗಳ ಒಳಗೆ
ಬದುಕಾಗುವುದು ಮುಂದೆ
ಬಂಗಾರದ ಬಣ್ಣದ ಸವಿಯಾದ ಬೋಂಡ


-ಫಣೀಶ್ ದುದ್ದ

ಬಂದುಬಿಡು ನೀ ಬೇಗ ..

ಬಂದುಬಿಡು ನೀ ಬೇಗ ...

ನೀನಿಡುವ ರಂಗವಲ್ಲಿಯ ಸೊಬಗ
ನೋಡಲು ಹವಣಿಸುತಿಹನು
ನಿದ್ದೆಯಿಂದೆದ್ದ ಮುದ್ದು ರವಿಯು

 
ನಿನ್ನ ಗಾನದ ಪರಿಯ ಕೇಳಲು
ಚಿಗುರಿ ನಿಂತಿಹುದು
ನೀ ನೆಟ್ಟ ತುಳಸಿಯ ಗಿಡವು

 
ನೀನುಟ್ಟ ಸೀರೆಯ ಸೌಂದರ್ಯ 
ನೋಡಲು ಕಾದಿಹೆನು ಅನುದಿನವು
ನಿನ್ನ ಮನೆಯ ಮುಂದೆ

 
ಬಂದುಬಿಡು ನೀ ಬೇಗ ನನ್ನಯ ಮನೆಗೆ
ಕಲಿಸಬೇಕಿದೆ ಈಗ ನಿನ್ನೆಲ್ಲ ಆಚಾರ
ನಮ್ಮ ಮುದ್ದಾದ ಮಕ್ಕಳಿಗೆ

- ಫಣೀಶ್ ದುದ್ದ

ಗುರುವಾರ, ಮಾರ್ಚ್ 9, 2017

ಹೆಣ್ಣಿಗಲ್ಲದೇ ಮತ್ತಿನ್ಯಾರಿಗಿರಲು ಸಾಧ್ಯ?

ಹೆಣ್ಣಿಗಲ್ಲದೇ ಮತ್ತಿನ್ಯಾರಿಗಿರಲು ಸಾಧ್ಯ?

ಓಡಿಸುತ್ತಿದ್ದ ಬೈಕಿಂದ ಆಯತಪ್ಪಿ ಬಿದ್ದೊಡನೆ
ಜೇಬೊಳಗೆ ರಿಂಗಣಿಸುವ ಅಮ್ಮನಾ ಕರೆಗಂಟೆ
ಎಲ್ಲೋ ಹಸಿದಿಹ ಕರುವಿನಾ ಕೂಗಿಗೆ
ಹಸುವಿನ ಕೆಚ್ಚಲಲಿ ಜಿನುಗುವಾ ನೊರೆಹಾಲು

 
ಎಷ್ಟಾದರೂ ಅದು ಹೆತ್ತ ಕರುಳಲ್ಲವೇ
ಮಗುವಿನ ಕೂಗಿಗೆ ಮರುಗಲೇ ಬೇಕು
ಹೆಣ್ಣಿಗಲ್ಲದೇ ಮತ್ತಿನ್ಯಾರಿಗಿರಲು ಸಾಧ್ಯ?
ಕಾಣದಾ ಕೂಗಿಗೆ ಮಿಡಿಯುವಾ ಮನಸು

-ಫಣೀಶ್ ದುದ್ದ

ನಮ್ಮೂರ ಬುದುಕು...

 ನಮ್ಮೂರ ಬುದುಕು...

ನಾವು ಚಿಕ್ಕವರಿದ್ದೆವು , ಎಲ್ಲಿಂದಲೂ ತಂದರು
ನಮ್ಮ ಮದುವೆ ಮಾಡಿದರು ,
ಊರ ಮುಂದೊಂದು ಮನೆಯ ಕಟ್ಟಿದರು
"ಅರಳಿಯ ಕಟ್ಟೆ"ಯೆಂದರು,
ಕಹಿಯೆಂದ ಮಾತ್ರಕ್ಕೆ ಅವಳನ್ನೆ ಮರೆತರು,
ಹೇಗೆ ಮರೆಯಲಿ ನನ್ನ ಬಾಳಿನಾ ಬೆಳಕಾ,
ಬೇವಿನಾ ಬದುಕ , ಕೂಡಿ ಹೇಳುವೆವು ನಾವು
ನಮ್ಮೂರ ಬುದುಕ...


ನಮಗಿಂತ ಹಿರಿಯ, ನೂರಾರು ಹರೆಯ
ಬೆನ್ನು ಮುರಿದು ಬಿದ್ದಿಹನು ಆ ಮೂಲೆಯಲ್ಲಿ
ನೀರಿದ್ದ ಹೊತ್ತು ಊರತುಂಬಾ ಗತ್ತು
ರಾಟೆಯಿಲ್ಲದ ಬಾವಿ, ನೀರು ಬತ್ತಿದ ಮೇಲೆ
ಕೇಳುವವರಿನ್ಯಾರು ಅವನಾ ವ್ಯಥೆಯ?


ಊರ ಒಳಗೊಂದು ಶಾನುಭೋಗರ ಮನೆ
ರೂಲು ಹಿಡಿಯಲೂ ಬರದ ಶ್ಯಾನ್ಬೋಗ ಚೆನ್ನಿಗ
ಘಟವಾಣಿ ಹೆಂಗಸು ಅವರಮ್ಮ ಗಂಗಮ್ಮ
ಮೂರೂ ಬಿಟ್ಟ ಗಂಡು ಮೂದೇವಿ ಅಪ್ಪಣ್ಣ
ಅಣ್ಣತಮ್ಮಂದಿರ ಅನುದಿನದ ಜಗಳದಿ 

ಶ್ಯಾನುಭೋಗರ ಶಯನ ಗೃಹವೇ ಭಂಗ

ಊರ ಹೊರಗೊಬ್ಬಳು ನನ್ನವಳ ಸವತಿ
ದೆವ್ವದ ಗೂಡಂತೆ ಅವಳ ಒಂಟಿಯಾ ಗೂಡು
ಸೊಗಸಾದ ಸಿಹಿಯಾದ ಹುಣಸೆಯಾ ಹಣ್ಣು
ಉಪ್ಪು ಮೆಣಸು ಜೀರಿಗೆಯ ಸೇರಿಸಿ
ಕುಟ್ಟುತಿವೆ ಮಕ್ಕಳು ಅವಳ ಅಂಗಳವ ಸೇರಿ


ಮಕ್ಕಳಾ ಕಂಡರೆ ಇವಳಿಗೂ ಪ್ರೀತಿ
ದೂರವೇ ಉಳಿದಿವೆ ಇವಳು ಕಹಿಯೆಂದು ಹೇಳಿ
ಆದರೂ ಬರುತಾವೆ ಒಮ್ಮೊಮ್ಮೆ ಇತ್ತ
ಅವರಮ್ಮ ಮುನಿದಾಗ ಸಿಡುಬು ಸೀತಾಳೆ ಹೊತ್ತು
ನೀಡುವಳು ನನ್ನವಳು ಪ್ರೀತಿಯಾ ತುತ್ತು


ಹೊನ್ನಮ್ಮ ದ್ಯಾವಮ್ಮ ನಮ್ಮೂರ ದೇವ್ರು
ಉಗಾದಿಯ ಮುನ್ನ ಊರಿನಾ ಜಾತ್ರೆ
ಊರಿನಾ ತುಂಬೆಲ್ಲ ತಳಿರಿನಾ ತೋರಣ
ಹೊರಡುವಾ ಮುನ್ನ ಅಡ್ಡೆಯಾ ಉತ್ಸವ
ಬರುವರು ನಮ್ಮ ಬಳಿ ಮರೆಯದೇ ಎಂದೂ


ನೂರಾರು ಮಕ್ಕಳಾ ಹುಟ್ಟನ್ನು ಕಂಡಿಹೆವು
ನೂರಾರು ಸಾವಿನಾ ಮೆರವಣಿಗೆಯ ನೋಡಿಹೆವು
ನೂರಾರು ವ್ಯಾಜ್ಯಕೆ ನಮ್ಮ ಮನೆಯೆ ಅಡ್ಡ
ನೂರಾರು ತೀರ್ಪಿಗೆ ನಾವಿಬ್ಬರೆ ಸಾಕ್ಷಿ
ನೂರಾರು ವರುಷದಿ ಬಾಳುತಿರುವೆವು ಇಲ್ಲಿ
ಹರುಷದಿ ಹೇಳುವೆವು ಇದು ನಮ್ಮಯ ಹಳ್ಳಿ


-ಫಣೀಶ್ ದುದ್ದ

ಮನೆ

ಮನೆ
 
ನಮ್ಮನೆ, ನಿಮ್ಮನೆ,
ನೆರೆ ಮನೆ, ಹೊರ ಮನೆ,
ಯಾವ ಮನೆಯಿಲ್ಲೀಗ
ಯಾರ ಮನೆಯೋ ?

 
ನಮ್ಮದು, ನಿಮ್ಮದು,
ಎಂಬುದೇ ಸುಳ್ಳದು,
ಅವನೊಬ್ಬನಾಟವೇ
ದಿಟವಾದ ಪಾಠವು

 
ನೆನ್ನೆಯು ಅಳಿದೆದೆ,
ನಾಳೆಯು ಬರಲಿದೆ,
ಇಂದಿನ ದಿನವಿದೋ
ನಿಜವಾದ ಜೀವನ

 
ಜಾತಿಯಾ ಮರೆಯಿರಿ
ಭೇಧವಾ ತೊರೆಯಿರಿ
ಬನ್ನಿರಿ ಕೂಡುವಾ
ಅವನ ಮನೆಯಂಗಳದಿ ಆಡುವಾ.



-ಫಣೀಶ್ ದುದ್ದ

ಭ್ರಮೆ

 ಭ್ರಮೆ

ಯಾರ ದೃಷ್ಟಿಯು ಬಿತ್ತೋ
ನಮ್ಮಿಬ್ಬರ ಸಂಭ್ರಮಕೆ
ಹಾರೇ ಹೋಯಿತು ಹಕ್ಕಿ
ಗೂಡ ಬಿಟ್ಟು ಗುಮ್ಮನೆ


ಇನ್ನೆಲ್ಲಿ ಹುಟ್ಟಿಹುದು
ಸಂಭ್ರಮವು ಈ ಮನದಿ
ನೀನಿರದ ಮನೆಯಿದುವೆ
ನೀರವದ ಗೂಡು


ಮನದಾಳದ ಮಾಯೆಗೆ
ನೀ ಮರಳಿ ಬರುವೆಂಬ ಭ್ರಾಂತಿ
ಭ್ರಮೆಯೊಳಗೆ ಸಾಗುತಿದೆ
ಬದುಕಿನಾ ದೋಣಿ ...
.

- ಫಣೀಶ್ ದುದ್ದ

ಸೋಮವಾರ, ಫೆಬ್ರವರಿ 27, 2017

ಮಳೆಗಾಲದ ಒಂಟಿತನ ಮತ್ತು ಆ ಛತ್ರಿ..


ಮಳೆಗಾಲದ ಒಂಟಿತನ ಮತ್ತು ಆ ಛತ್ರಿ..

" ಮಳೆ ಬರ್ತಿದೆ , ಛತ್ರಿ ತಗೊಂಡು ಹೋಗೋ ", ಎಂದು ಅದೆಷ್ಟು ಬಾರಿ ಹೇಳಿದರೂ , ಅಂದು ಅದರ ಕಡೆ ತಿರುಗಿಯೋ ನೋಡದ ಬದುಕು ಇವತ್ತು ಈ ಸ್ಥಿತಿಗೆ ಬಂದುಬಿಟ್ಟಿದೆ.
ಹುಡುಗರು ಕೈಯ್ಯಲ್ಲಿ ಛತ್ರಿ ಹಿಡಿದು ರಸ್ತೆಯಲ್ಲಿ ಹೋಗುವುದೇ ದೊಡ್ಡ ಅವಮಾನ , ಅದೇನಿದ್ದರೂ ಹುಡುಗಿಯರಿಗೇ ಸೀಮಿತ ಎಂದು ಪರಿಗಣಿಸಿದ ಕಾಲ ಒಂದಿತ್ತು.
ಈಗ ಕಾಲ ಬದಲಾಗಿದೆ.
ಕಾಲ ಅದೇ ಬದಲಾಗಿದೆಯೋ , ನನ್ನನ್ನೇ ಬದಲಾಯಿಸಿಬಿಟ್ಟಿದೆಯೋ ಗೊತ್ತಿಲ್ಲ.
ಮೊನ್ನೆ , ನೂರಾಎಂಬತ್ತು ರೂಪಾಯಿ ಕೊಟ್ಟು ಒಂದು ಛತ್ರಿ ತಂದದ್ದೂ ಆಯಿತು , ಸೋನೆ ಮಳೆಯಲ್ಲಿ , ಪುಣೆಯ ರಸ್ತೆಗಳಲ್ಲಿ ಅದನ್ನು ಹಿಡಿದು ಓಡಾಡಿಯೂ ಆಯಿತು.
ಭೋರ್ಗರೆದು ಸುರಿಯುವ ಮಳೆಗೆ ಸಿಕ್ಕಿ , ಅಲ್ಲೇ ಪಕ್ಕದಲ್ಲಿದ್ದ ಟೀ ಅಂಗಡಿಯಲ್ಲಿ ಕುಳಿತು ನಿರ್ಭೀತಿಯಿಂದ ಸ್ನೇಹಿತರೊಂದಿಗೆ ಗಂಟೆಗಟ್ಟಲೇ ಹರಟುತ್ತಿದ್ದ ನೆನಪು ಇನ್ನೂ ಹಸಿಯಾಗಿರುವಾಗಲೇ , ಕೊಂಚವೇ ಮಳೆ ಬಂದರೂ ಆದಷ್ಟು ಬೇಗ ಮನೆ ಸೇರಿಕೊಳ್ಳಬೇಕೆಂಬ ಭೀತಿ ಶುರುವಾಗಿದೆ.
ಮಡಿಕೇರಿಯಿಂದ ಹಾಸನದವರೆಗೂ , ಸುರಿವ ಮಳೆಯನ್ನೂ ಲೆಕ್ಕಿಸದೇ ಬೈಕಿನಲ್ಲಿ ಬಂದ ಹುಚ್ಚು ಧೈರ್ಯ, ಇಂದು ಛತ್ರಿಯಿಲ್ಲದೆ ಅಷ್ಟು ದೂರ ಹೋಗಲೂ ಇಲ್ಲದಂತಾಗಿದೆ.
ಕೊಡೆ ಹಿಡಿದು ಹೋಗುವ ಹುಡುಗರನ್ನು ಗೇಲಿ ಮಾಡುತ್ತಿದ್ದ ಕಾಲ ಬದಲಾಗಿದೆ , ಮನಸ್ಸು ಪ್ರಬುಧ್ದವಾಗಿದೆ , ವಯಸ್ಸು ತನ್ನೆಲ್ಲಾ ಹುಡುಗಾಟವನ್ನು ಬಿಟ್ಟು , ಒಂಟಿತನ ನನ್ನನ್ನೇ ನಾನು ಪ್ರಶ್ನಿಸಿಕೊಳ್ಳುವಂತೆ ಮಾಡಿದೆ .
ಅಂದಿನ ಎಲ್ಲಾ ಹುಡುಗಾಟಗಳಿಗೂ , ಹುಚ್ಚಾಟಗಳಿಗೂ ಜೊತೆಗಾರರಿದ್ದರು. ಈಗಲೂ ಇಲ್ಲ ಅಂದಲ್ಲ , ಈ ಕ್ಷಣಕ್ಕೆ ಜೊತೆಯಲ್ಲಿಲ್ಲ ಅಷ್ಟೆ.ಆದರೇ ಅದೇ ಹುಡುಗಾಟಿಕೆ ಈಗಲೂ ಅವರಲ್ಲಿ ಉಳಿದಿರುವುದು ಅನುಮಾನವೇ ಸರಿ , ಕಾಲ ಅವರ ಬದುಕನ್ನೂ ಬದಲಿಸಿಬಿಟ್ಟಿದೆ.
ಸದ್ಯಕ್ಕೆ ಇಲ್ಲಿನ ಮಳೆಗಾಲದ ಈ ಒಂಟಿತನಕ್ಕೆ ,ಅಂದು ಬೇಡವಾಗಿದ್ದ ಛತ್ರಿ ಇಂದು ಜೊತೆಗಾರನಾಗಿದೆ .
ಅದಕ್ಕೇ ಏನೋ ಅಜ್ಜಿ ಸತ್ತಾಗಿನಿಂದ ಮಳೆ ಬರಲೀ , ಬಿಡಲಿ, ಅಜ್ಜ ತಮ್ಮ ದೊಡ್ಡ ಕೊಡೆಯನ್ನು ಊರುಗೋಲಿನಂತೆ ಹಿಡಿದು ಸಂಜೆ ವಾಕಿಂಗ್ ಹೋಗುತ್ತಿದ್ದಿದ್ದು ...

ಅದೇನೇ ಇರಲಿ , ಅಂದು ನಾನು ಗೇಲಿ ಮಾಡುತ್ತಿದ್ದ ಹುಡುಗರ ಕೈಯ್ಯಲ್ಲಿದ್ದ ಅದೇ ಛತ್ರಿ , ಇಂದು ಮಳೆಗಾಲದ ಈ ಒಂಟಿತನಕ್ಕೆ ಆಸರೆಯಾಗಿಬಿಟ್ಟಿದೆ .

      
                               -ಫಣೀಶ್ ದುದ್ದ

ಗುರುವಾರ, ಫೆಬ್ರವರಿ 9, 2017

ಖಾಲಿ ಹಾಳೆಯ ಕಾಣದ ನೋವು...


ಖಾಲಿ ಹಾಳೆಯ ಕಾಣದ ನೋವು...

ಖಾಲಿ ಹಾಳೆಯ ಕಾಣದ ನೋವು
ಗೀಚಿ ಅಳಿಸಿದ ಮನಸಿನ ಮಾತು
ಬರೆಯದೆ ಉಳಿದ ಪ್ರೀತಿಯ ಮೌನ
ಕನಸಲೇ ಕಾಡಿದ ಹೃದಯದ ಮಿಡಿತ
ಶಾಯಿ ಮುಗಿದ ಲೇಖನಿಯ ಮುನಿಸು
ತೀರವೇ ತಲುಪದ ಪ್ರೇಮದ ಕವಿತೆ
ಖಾಲಿ ಹಾಳೆಯ ಕಾಣದ ನೋವು

                          - ಫಣೀಶ್ ದುದ್ದ

ಶುಕ್ರವಾರ, ಜನವರಿ 13, 2017

ಇದುವೆ ಸಂಕ್ರಮಣ ...


ಇದುವೆ ಸಂಕ್ರಮಣ ...

ಬಾನ ದಾರಿಯಲಿ ಭಾರ್ಗವನ ಹೆಜ್ಜೆ
ಬದಲಾಗುತಿರಲು ಉತ್ತರೆಯ ಕಡೆಗೆ
ಭೂರಮೆಯ ಅಂಗಳದಿ ಹೆಚ್ಚಿದೆ ಬೆಳಕು
ಬೆಳಕಿನಾ ಹೊಳಪಿಗೆ ಜಗದೆಲ್ಲೆಡೆ ಸುಗ್ಗಿ
ಇದುವೆ ಸಂಕ್ರಮಣ ...

ಮೌನದಿ ಮಾಸುತಾ ಮಾಗಿಯಾ ಕಾಲ
ಮೆಲ್ಲನೆ ಕರಗುತಿದೆ ಮನಸಿನಾ ಮಂಜು
ಕರಿ ಮೋಡ ದಾಟುತಾ ಸೂರ್ಯನಾ ರಶ್ಮಿ
ಹೊಸ ಚೆಲುವ ತಂದಿದೆ ಕಾಮನಾಬಿಲ್ಲು
ಇದುವೆ ಸಂಕ್ರಮಣ ...

ಹಳೆ ನೋವ ಕಳೆದು ಹೊಸ ಭಾವ ತಳೆದು
ಮೂಡಲಿ ಮನೆ ಮನದಿ ಹೊಸತನದ ಕಾಂತಿ
ಭಾಸ್ಕರನ ಹಾದಿಯಲಿ ಉತ್ತರೆಯ ರಂಗೋಲಿ
ರಂಗನ್ನು ತರಲಿ ಈ ಮಕರ ಸಂಕ್ರಾಂತಿ
ಇದುವೆ ಸಂಕ್ರಮಣ ...


                    - ಫಣೀಶ್ ದುದ್ದ

ಶನಿವಾರ, ಜನವರಿ 7, 2017

ಭಾವನೆಗಳ ಸುಳಿಯಲ್ಲಿ...


ಭಾವನೆಗಳ ಸುಳಿಯಲ್ಲಿ...

ಭಾವನೆಗಳ ಸುಳಿಯಲ್ಲಿ ಬದುಕಿನಾ ಹಾಯಿದೋಣಿ
ದೂರದಾ ತೀರದಲಿ ಕನಸಿನಾ ಕೂಸುಮರಿ
ಮೊರೆಯುವಾ ಕಡಲಿನಲಿ ಮುಳುಗುವಾ ದಿಗಿಲು
ಕಾಣದಾ ತೀರವನು ಸೇರುವಾ ತವಕ

               - ಫಣೀಶ್ ದುದ್ದ

ತಿಳಿಯದಾಗಿದೆ ನಿನ್ನ ತಲುಪುವಾ ದಾರಿ...


ತಿಳಿಯದಾಗಿದೆ ನಿನ್ನ ತಲುಪುವಾ ದಾರಿ...


ಇಳಿ ಸಂಜೆ ಕಳೆದು ನಡುರಾತ್ರಿ ಸರಿದು
ಬೆಳಕಾಗಿ ಹುಟ್ಟುವುದು ನೀ ಹುಟ್ಟಿದಾ ದಿನ
ಹೊಂಗಿರಣ ಧರೆಯನ್ನು ಮುತ್ತಿಡುವ ಮುನ್ನ
ತಿಳಿಸಬೇಕಿದೆ ನಿನಗೆ ಪುಟ್ಟ ಶುಭಾಶಯವೊಂದ

ಬಣ್ಣದಾಟವ ಮುಗಿಸಿ ಬಾನಂಚಿನಲ್ಲಿ ನಿಂತ
ರವಿಯನ್ನು ಕೇಳಿದೆ ತಿಳಿಸೆನ್ನ ಶುಭಾಶಯವ
ತಾರುಣ್ಯ ಗೀತೆಯ ತಾಳ ತಿಳಿಯದೆನಗೆಂದು
ತಿರುಗಿ ನೋಡದೇ ಇಳಿದ ಅಬ್ದಿಯಾ ಒಳಗೆ

ನಗೆಮೊಗದ ಚಂದಿರ ನಗುನಗುತ ಬಂದ
ನಾಚುತಲಿ ನಸುನಗುವ ತಾರೆಗಳ ನಡುವೆ
ಚೆಂದದಿ ಕೇಳಿದೆ ತಿಳಿಸೆನ್ನ ಶುಭಾಶಯವ
ಕೇಳಿದೊಡೆ ಮರೆಯಾದ ಮೋಡಗಳ ಹಿಂದೆ

ಇರುಳನ್ನು ಮುರಿದು ಮುಂಜಾವು ಹರಿದು
ಮೂಡಿತು ಮುದ್ದಾದ ಮಂಜಿನಾ ಹನಿಯು
ಮೌನದಿ ಕೇಳಿದೆ ತಿಳಿಸೆನ್ನ ಶುಭಾಶಯವ
ಜಾರಿತು ಜೀಕುತ ಹನಿಯೊಡೆದು ನೀರಾಗಿ

ಮರುಮಾತು ಮೂಡದೇ ಮೌನದಿ ಕುಳಿತಾಗ
ಹೊರಟಿತು ತಂಗಾಳಿ ಶುಭಾಶಯವ ಕೋರಿ
ಅರಸುತಿದೆ ಮನಸು ಗಾಳಿ ಹೆಜ್ಜೆಯಾ ಹಾದಿ 
ತಿಳಿಯದಾಗಿದೆ ನಿನ್ನ ತಲುಪುವಾ ದಾರಿ


                                   - ಫಣೀಶ್ ದುದ್ದ

ಬುಧವಾರ, ಜನವರಿ 4, 2017

ಕಲ್ಲು ಮಂಟಪ

 ಕಲ್ಲು ಮಂಟಪ


“ನಾನು ಯಾವ ಕಾರಣಕ್ಕೆ ಇಲ್ಲಿಗೆ ಬರಲು ಶುರು ಮಾಡಿದೆ..?
ಅದೆಷ್ಟೋ ದೂರದಿಂದ ಊರು ಬಿಟ್ಟು, ಈ ಕಾಡಿನಲ್ಲಿ ಏದುಸಿರು ಬಿಡುತ್ತಾ, ಐದಾರು ಕಿಲೋಮೀಟರ್ ಬೆಟ್ಟ ಹತ್ತಿ, ಅಷ್ಟು ಚೆನ್ನಾಗಿರುತ್ತಿದ್ದ ಮನೆ ಊಟ ಬಿಟ್ಟು, ಈ ಭಟ್ಟರ ಮನೆಯಲ್ಲಿ ಸಿಕ್ಕಿದ್ದು ತಿಂದು, ಮತ್ತೆರಡು ಕಿಲೋಮೀಟರ್ ಗುಡ್ಡ ಹತ್ತಿ ಬಂದು ಈ ಮಂಟಪದ ಕಂಬಕ್ಕೊರಗಿ ಕೂರೋ ದರ್ದಾದರೂ ನನಗೆ ಏನಿತ್ತು..?"
ಮೇಲೆ ನಾಲ್ಕು ಗುಡ್ಡ ಹತ್ತಿದರೆ ಶೇಷ ಪರ್ವತ, ಇನ್ನೂ ಮುಂದಕ್ಕೆ ಕುಮಾರ ಪರ್ವತ, ಎಡಗಡೆಗೆ ನೋಡಿದಷ್ಟುದ್ದಕ್ಕೂ ಪರ್ವತಗಳ ಸಾಲು, ಬಲಗಡೆಗೆ ನಾಲ್ಕು ಗುಡ್ಡ ಹತ್ತಿ, ಇಳಿದರೆ ಈ ಗುಡ್ಡಗಳು ಮತ್ತು ಕಾಡನ್ನು ಬೇರ್ಪಡಿಸುವ ಭಟ್ಟರ ಒಂಟಿ ಮನೆ. ಇವೆಲ್ಲದರ ನಡುವೆ ಒಂಟಿಯಾಗಿ ನಿಂತಿರುವ ಕಲ್ಲು ಮಂಟಪ.
"ಮನೆಯ ಎಲ್ಲಾ ಸುಖ, ನೆಮ್ಮದಿಗಳನ್ನು ಬಿಟ್ಟು, ಇಲ್ಲಿ ಬಂದು ಈ ಕಂಬಕ್ಕೊರಗಬೇಕಾಗಿತ್ತಾ..?
ಒಂದೆರಡು ಬಾರಿಯಾದರೆ ಸರಿ, ಅದೆಷ್ಟು ಬಾರಿ... ಲೆಕ್ಕವಿಲ್ಲದಷ್ಟು... ದಿನಗಟ್ಟಲೇ.. ಒಮ್ಮೊಮ್ಮೆ ವಾರಗಟ್ಟಲೆ...”
"ಅದೇಕೆ ಇಲ್ಲಿಗೆ ಬರಲು ಪ್ರಾರಂಭ ಮಾಡಿದೆ ಎಂದು ಮಾತ್ರ ಗೊತ್ತಿಲ್ಲ, ಆದರೆ ಈ ಕಲ್ಲು ಮಂಟಪದ ಕಂಬಕ್ಕೊರಗಿ, ಒಂದು ನಿಮಿಷ ಕಣ್ಣು ಮುಚ್ಚಿದರೆ ಸಾಕು, ಮನಸ್ಸಿಗೆ ಅದೆಂತಾ ನೆಮ್ಮದಿ. ಮನಸ್ಸಿನಲ್ಲಿ ಅದೆಷ್ಟು ತಳಮಳವಿದ್ದರೂ, ಅದೇನು ಮಾಯೆಯೋ, ಇಲ್ಲಿಗೆ ಬಂದೊಡನೆ ಪ್ರಶಾಂತವಾಗಿಬಿಡುತ್ತಿತ್ತು. ಮೊದಲೆರಡು ಬಾರಿ ಪೂರ್ತಿಯಾಗಿ ಕುಮಾರ ಪರ್ವತದ ತುದಿಯವರೆಗೂ ಹತ್ತಿದ್ದು ಬಿಟ್ಟರೆ, ಆ ನಂತರ ಇಲ್ಲಿಂದ ಮುಂದೆ ಹೋಗಲೇ ಇಲ್ಲ... “
"ಈಗ ಅನ್ನಿಸುತ್ತಿದೆ, ಅಂದು ನಾನು ಇಲ್ಲಿಗೆ ಬರದೇ ಹೋಗಿದ್ದಿದ್ದರೇ ಚೆನ್ನಾಗಿರುತ್ತಿತ್ತೇನೋ...”
"ಇಲ್ಲೇ ತಾನೇ ಅವಳು ನನಗೆ ಸಿಕ್ಕಿದ್ದು, ಇದೇ ಕಲ್ಲು ಮಂಟಪದ ಕಂಬಕ್ಕೊರಗಿದ್ದಾಗಲೇ ತಾನೆ ಅವಳು ಏದುಸಿರು ಬಿಡುತ್ತಾ ಬಂದು, ನನ್ನ ಇರುವಿಕೆಯನ್ನು ಗಮನಿಸದೇ, ಕಂಬದ ಇನ್ನೊಂದು ಬದಿಗೊರಗಿದ್ದು, ಆ ತಂಪಾದ ಗಾಳಿಗೆ, ಅವಳ ಕೂದಲು ನನ್ನ ಮುಖಕ್ಕೆ ಕಚಗುಳಿಯಿಟ್ಟಿದ್ದು, ಹೆಸರಿಗೆ ತಕ್ಕ ಬಿಳಿ ಮೈಬಣ್ಣ , ಎಂತಹವರನ್ನು ಮೋಡಿ ಮಾಡುವ ಕೆನ್ನೆಗುಳಿ ಮುಖ.... ಅವತ್ತೇ ಅಲ್ಲವೇ ನನ್ನ ನೆಮ್ಮದಿ ಕವಲೊಡಿದಿದ್ದು .. ಶಾಂತ ಸರೋವರದಂತಿದ್ದ ನನ್ನ ಮನಸ್ಸಿನಲ್ಲಿ ಪ್ರೀತಿಯ ಅಲೆ ಮೂಡಿದ್ದು ..”.

"ಎಷ್ಟೋ ವರ್ಷದ ಹಿಂದೆ ಕುಮಾರ ಪರ್ವತದ ತುದಿಯವರೆಗೂ ಹೋದ ನಾನು , ಅಂದು ಮಂತ್ರಮುಗ್ದನಾಗಿ ಅವಳ ಹಿಂದೆ ಹೋಗಿದ್ದೆ. ಅವಳು ಚಾರಣಕ್ಕೆ ಬಂದವಳು. ಯಾವ ಚಾರಣಿಗರೊಂದಿಗೂ ಮಾತನಾಡದ ನಾನು ಅಂದು ನಾನೇ ಅವಳ ಜೊತೆ ಮಾತನಾಡಲು ಪ್ರಾರಂಭಿಸಿದೆ. ಶೇಷ ಪರ್ವತದ ತುದಿಯಲ್ಲಿ ಮೋಡಗಳ ನಡುವೆ ನಿಂತು "ಹಾಯ್", ಎಂದು ಶುರುವಾದ ಗೆಳೆತನ, ಕುಮಾರ ಪರ್ವತವನ್ನು ಹತ್ತಿ , ಮತ್ತೆ ಕಲ್ಲು ಮಂಟಪದ ಬಳಿ ಬರುವುದರೊಳಗೆ, ನಾನು ನನ್ನ ಮನಸ್ಸನ್ನು ಅವಳಿಗೆ ಕೊಟ್ಟಿದ್ದೆ, ಅವಳ ಫೋನ್ ನಂಬರ್ ನ್ನು ನನಗೆ ಕೊಟ್ಟಿದ್ದಳು.”

"ಮುಂದೆ ಇದೇ ಗೆಳೆತನ ಪ್ರೀತಿಯಾಗಿ ಬೆಳೆಯಲು ಹೆಚ್ಚೇನು ಸಮಯ ಬೇಕಾಗಲಿಲ್ಲ, ನನ್ನ ಈ ಹುಚ್ಚಾಟಗಳಿಗೆ ಅವಳನ್ನು ಪಾಲುಗಾರ್ತಿಯನ್ನಾಗಿ ಮಾಡಿಕೊಂಡು , ಮತ್ತೊಮ್ಮೆ ಅವಳನ್ನು ಇದೇ ಕಾಡು ಅಲೆಸಿ , ಒಮ್ಮೆ ಅವಳು ತಲೆ ನೋವೆಂದದ್ದಕ್ಕೆ ಭಟ್ಟರ ಮನೆಯಲ್ಲಿ ಕಷಾಯ ಮಾಡಿಸಿಕೊಟ್ಟು , ಇದೇ ಕಲ್ಲು ಮಂಟಪದ ಕಂಬಕ್ಕೊರಗಿ , ನಾನು ಪೂರ್ವದ ದಿಗಂತವನ್ನು ನೋಡುತ್ತಾ , ಅವಳು ದಕ್ಷಿಣದ ಪರ್ವತ ಶ್ರೇಣಿಗಳನ್ನು ನೋಡುತ್ತಾ , ನಮ್ಮ ಜೀವನದ ಕನಸು ಕಟ್ಟಿದ್ದು. ನನ್ನ ಹೆಸರನ್ನು ಅವಳು , ಅವಳ ಹೆಸರನ್ನು ನಾನು , ಅದೆಷ್ಟು ಬಾರಿ ಕೂಗಿ , ಈ ಪರ್ವತ ರಾಶಿಗಳ ಮಧ್ಯೆ ಅದರ ಪ್ರತಿ ಧ್ವನಿಯನ್ನು ಕೇಳಿದ್ದು".

"ಅವತ್ತೇ ನನ್ನ ಪ್ರಶಾಂತವಾದ ಮನಸ್ಸಿನಲ್ಲಿ ಆ ಪ್ರತಿಧ್ವನಿಯ ಅಲೆಗಳ ಅಬ್ಭರ ಹೆಚ್ಚಾದ ಸುಳಿವು ಸಿಕ್ಕಿತ್ತು".

" ಮುಂದೆ , ಮತ್ತೆ ಮತ್ತೆ ಮನಸ್ಸಿನ ತಲ್ಲಣ ಹೆಚ್ಚುತ್ತಲೇ ಹೋಯಿತು. ಆದರೆ ಅಂದು ಮಾತ್ರ , ಅದೇನಾಯಿತೋ ... ಅಂದು ಇದ್ದಕ್ಕಿದ್ದಂತೆ ಇಲ್ಲಿಗೆ ಹೊರಟೆ , ಎಂದೂ ಬೇಡವೆನ್ನದಿದ್ದ ಅಮ್ಮ , ಅಂದು ಅದೆಷ್ಟು ಬೇಡವೆಂದರೂ ಇಲ್ಲಿಗೆ ಬಂದೆ , ನನ್ನವಳನ್ನೂ ಕರೆದೆ , ಮತ್ತೆ ತಲೆ ನೋವು ಹೆಚ್ಚಾಗಿದೆಯೆಂದು ಬರುವುದಿಲ್ಲವೆಂದಳು".

"ಆದರೆ , ಮೊದಲ ಬಾರಿ ಬಂದು ಕಂಬಕ್ಕೊರಗಿ ಪ್ರಶಾಂತವಾಗಿ ಕುಳಿತಂತೆ ಅಂದು ಕುಳಿತುಕೊಳ್ಳಲಾಗಲಿಲ್ಲ.”
" ಸರೋವರ ಸಮುದ್ರದಂತಾಗಿ , ಅಲೆಗಳು ತೀರದ ಬಂಡೆಗಪ್ಪಳಿಸಿದ್ದವು. ಮನಸ್ಸಿನಲ್ಲಿ ನಡುಕ ಶುರುವಾಗಿತ್ತು. ಅದೇಕೋ ಒಂದು ನಿಮಿಷವೂ ಅಲ್ಲಿರಲಾಗಲಿಲ್ಲ, ಹೊರಟೇಬಿಟ್ಟೆ".

"ಅವಳ ಸಣ್ಣ ತಲೆನೋವು ಕೇವಲ ತಲೆನೋವಾಗಿ ಉಳಿದಿರಲಿಲ್ಲ. ಮೆದುಳಿನ ಜ್ವರವಾಗಿ ಅವಳನ್ನೇ ಆಹುತಿ ತೆಗೆದುಕೊಂಡಿತ್ತು".
"ಅಂದು ಪರ್ವತ ರಾಶಿಗಳ ಮಧ್ಯೆ ಕೇಳಿದ ಅವಳ ಪ್ರತಿಧ್ವನಿ ಕ಼ೀಣಿಸಿತ್ತು".

"ಶಾಂತ ಸರೋವರದಂತಿದ್ದ ಮನಸ್ಸನ್ನು , ಇನ್ನೊಂದು ಶಾಂತವಾಗದಂತೆ ಮಾಡಿ ಹೋಗಿದ್ದಳು”.

"ಈಗ ಮತ್ತದೇ ನೆಮ್ಮದಿಯನ್ನು ಹುಡುಕುತ್ತಾ , ಈ ಕಂಬಕ್ಕೊರಗಿ ಕುಳಿತಿದ್ದೇನೆ... “

ದಿಗಂತದಲ್ಲಿ ಸೂರ್ಯ ಮುಳುಗುತ್ತಿದ್ದಾನೆ. ಕಡಲು ಭೋರ್ಗರೆಯುತ್ತಿದೆ. ಇವೆಲ್ಲವನ್ನು ನೋಡುತ್ತಾ ಶಾಂತವಾಗಿ ನಿರ್ಲಿಪ್ತತೆಯಿಂದ ನಿಂತಿದೆ ಕಲ್ಲು ಮಂಟಪ.


- ಫಣೀಶ್ ದುದ್ದ

ಮೌನದಾ ಮಾತು...



ಮೌನದಾ ಮಾತು...


ಮೌನ ತುಂಬಿದ ಮನದಿ ಮುಗಿಯದಾ ಮಾತು
ಕಾಡುವಾ ಕನಸುಗಳ ಜೊತೆ ಮಾಸದಾ ನೆನಪುಗಳು
ಅನಿಸಿದ್ದೆಲ್ಲವ ಬಿಡದೆ ಬರೆಯುವಾ ಬಯಕೆ
ಬರವಣಿಗೆಯ ಮರೆಸುತಿದೆ ಲೇಖನಿಯ ಮುನಿಸು
ಬರೆಯದೇ ಉಳಿದಿದೆ ಆ ಮೌನದಾ ಮಾತು


                        - ಫಣೀಶ್ ದುದ್ದ