ಸೋಮವಾರ, ಫೆಬ್ರವರಿ 27, 2017

ಮಳೆಗಾಲದ ಒಂಟಿತನ ಮತ್ತು ಆ ಛತ್ರಿ..


ಮಳೆಗಾಲದ ಒಂಟಿತನ ಮತ್ತು ಆ ಛತ್ರಿ..

" ಮಳೆ ಬರ್ತಿದೆ , ಛತ್ರಿ ತಗೊಂಡು ಹೋಗೋ ", ಎಂದು ಅದೆಷ್ಟು ಬಾರಿ ಹೇಳಿದರೂ , ಅಂದು ಅದರ ಕಡೆ ತಿರುಗಿಯೋ ನೋಡದ ಬದುಕು ಇವತ್ತು ಈ ಸ್ಥಿತಿಗೆ ಬಂದುಬಿಟ್ಟಿದೆ.
ಹುಡುಗರು ಕೈಯ್ಯಲ್ಲಿ ಛತ್ರಿ ಹಿಡಿದು ರಸ್ತೆಯಲ್ಲಿ ಹೋಗುವುದೇ ದೊಡ್ಡ ಅವಮಾನ , ಅದೇನಿದ್ದರೂ ಹುಡುಗಿಯರಿಗೇ ಸೀಮಿತ ಎಂದು ಪರಿಗಣಿಸಿದ ಕಾಲ ಒಂದಿತ್ತು.
ಈಗ ಕಾಲ ಬದಲಾಗಿದೆ.
ಕಾಲ ಅದೇ ಬದಲಾಗಿದೆಯೋ , ನನ್ನನ್ನೇ ಬದಲಾಯಿಸಿಬಿಟ್ಟಿದೆಯೋ ಗೊತ್ತಿಲ್ಲ.
ಮೊನ್ನೆ , ನೂರಾಎಂಬತ್ತು ರೂಪಾಯಿ ಕೊಟ್ಟು ಒಂದು ಛತ್ರಿ ತಂದದ್ದೂ ಆಯಿತು , ಸೋನೆ ಮಳೆಯಲ್ಲಿ , ಪುಣೆಯ ರಸ್ತೆಗಳಲ್ಲಿ ಅದನ್ನು ಹಿಡಿದು ಓಡಾಡಿಯೂ ಆಯಿತು.
ಭೋರ್ಗರೆದು ಸುರಿಯುವ ಮಳೆಗೆ ಸಿಕ್ಕಿ , ಅಲ್ಲೇ ಪಕ್ಕದಲ್ಲಿದ್ದ ಟೀ ಅಂಗಡಿಯಲ್ಲಿ ಕುಳಿತು ನಿರ್ಭೀತಿಯಿಂದ ಸ್ನೇಹಿತರೊಂದಿಗೆ ಗಂಟೆಗಟ್ಟಲೇ ಹರಟುತ್ತಿದ್ದ ನೆನಪು ಇನ್ನೂ ಹಸಿಯಾಗಿರುವಾಗಲೇ , ಕೊಂಚವೇ ಮಳೆ ಬಂದರೂ ಆದಷ್ಟು ಬೇಗ ಮನೆ ಸೇರಿಕೊಳ್ಳಬೇಕೆಂಬ ಭೀತಿ ಶುರುವಾಗಿದೆ.
ಮಡಿಕೇರಿಯಿಂದ ಹಾಸನದವರೆಗೂ , ಸುರಿವ ಮಳೆಯನ್ನೂ ಲೆಕ್ಕಿಸದೇ ಬೈಕಿನಲ್ಲಿ ಬಂದ ಹುಚ್ಚು ಧೈರ್ಯ, ಇಂದು ಛತ್ರಿಯಿಲ್ಲದೆ ಅಷ್ಟು ದೂರ ಹೋಗಲೂ ಇಲ್ಲದಂತಾಗಿದೆ.
ಕೊಡೆ ಹಿಡಿದು ಹೋಗುವ ಹುಡುಗರನ್ನು ಗೇಲಿ ಮಾಡುತ್ತಿದ್ದ ಕಾಲ ಬದಲಾಗಿದೆ , ಮನಸ್ಸು ಪ್ರಬುಧ್ದವಾಗಿದೆ , ವಯಸ್ಸು ತನ್ನೆಲ್ಲಾ ಹುಡುಗಾಟವನ್ನು ಬಿಟ್ಟು , ಒಂಟಿತನ ನನ್ನನ್ನೇ ನಾನು ಪ್ರಶ್ನಿಸಿಕೊಳ್ಳುವಂತೆ ಮಾಡಿದೆ .
ಅಂದಿನ ಎಲ್ಲಾ ಹುಡುಗಾಟಗಳಿಗೂ , ಹುಚ್ಚಾಟಗಳಿಗೂ ಜೊತೆಗಾರರಿದ್ದರು. ಈಗಲೂ ಇಲ್ಲ ಅಂದಲ್ಲ , ಈ ಕ್ಷಣಕ್ಕೆ ಜೊತೆಯಲ್ಲಿಲ್ಲ ಅಷ್ಟೆ.ಆದರೇ ಅದೇ ಹುಡುಗಾಟಿಕೆ ಈಗಲೂ ಅವರಲ್ಲಿ ಉಳಿದಿರುವುದು ಅನುಮಾನವೇ ಸರಿ , ಕಾಲ ಅವರ ಬದುಕನ್ನೂ ಬದಲಿಸಿಬಿಟ್ಟಿದೆ.
ಸದ್ಯಕ್ಕೆ ಇಲ್ಲಿನ ಮಳೆಗಾಲದ ಈ ಒಂಟಿತನಕ್ಕೆ ,ಅಂದು ಬೇಡವಾಗಿದ್ದ ಛತ್ರಿ ಇಂದು ಜೊತೆಗಾರನಾಗಿದೆ .
ಅದಕ್ಕೇ ಏನೋ ಅಜ್ಜಿ ಸತ್ತಾಗಿನಿಂದ ಮಳೆ ಬರಲೀ , ಬಿಡಲಿ, ಅಜ್ಜ ತಮ್ಮ ದೊಡ್ಡ ಕೊಡೆಯನ್ನು ಊರುಗೋಲಿನಂತೆ ಹಿಡಿದು ಸಂಜೆ ವಾಕಿಂಗ್ ಹೋಗುತ್ತಿದ್ದಿದ್ದು ...

ಅದೇನೇ ಇರಲಿ , ಅಂದು ನಾನು ಗೇಲಿ ಮಾಡುತ್ತಿದ್ದ ಹುಡುಗರ ಕೈಯ್ಯಲ್ಲಿದ್ದ ಅದೇ ಛತ್ರಿ , ಇಂದು ಮಳೆಗಾಲದ ಈ ಒಂಟಿತನಕ್ಕೆ ಆಸರೆಯಾಗಿಬಿಟ್ಟಿದೆ .

      
                               -ಫಣೀಶ್ ದುದ್ದ

ಗುರುವಾರ, ಫೆಬ್ರವರಿ 9, 2017

ಖಾಲಿ ಹಾಳೆಯ ಕಾಣದ ನೋವು...


ಖಾಲಿ ಹಾಳೆಯ ಕಾಣದ ನೋವು...

ಖಾಲಿ ಹಾಳೆಯ ಕಾಣದ ನೋವು
ಗೀಚಿ ಅಳಿಸಿದ ಮನಸಿನ ಮಾತು
ಬರೆಯದೆ ಉಳಿದ ಪ್ರೀತಿಯ ಮೌನ
ಕನಸಲೇ ಕಾಡಿದ ಹೃದಯದ ಮಿಡಿತ
ಶಾಯಿ ಮುಗಿದ ಲೇಖನಿಯ ಮುನಿಸು
ತೀರವೇ ತಲುಪದ ಪ್ರೇಮದ ಕವಿತೆ
ಖಾಲಿ ಹಾಳೆಯ ಕಾಣದ ನೋವು

                          - ಫಣೀಶ್ ದುದ್ದ