ಭಾನುವಾರ, ಜೂನ್ 19, 2016

ನಮ್ಮ ಎಲ್ಲಾ ಕುಚೇಷ್ಟೆಗಳನ್ನು ನೋಡಿಯೂ, ನೋಡದಂತಿದ್ದಿದ್ದು ಅವನ ಸ್ಯಾಮ್ ಸಂಗ್ ಟ್ಯಾಬು


"ನಮ್ಮಎಲ್ಲಾಕುಚೇಷ್ಟೆಗಳನ್ನುನೋಡಿಯೂ,ನೋಡದಂತಿದ್ದಿದ್ದು ಅವನ ಸ್ಯಾಮ್ ಸಂಗ್ ಟ್ಯಾಬು "

 
ಆ ಎರಡು ರಸ್ತೆಗಳಲ್ಲಿ ಒಂದಕ್ಕೆ ಧನ್ವಂತರಿ ರಸ್ತೆಯೆಂದೂ , ಇನ್ನೊಂದಕ್ಕೆ ಕಲ್ಯಾಣ ರಸ್ತೆ ಎಂದು ಹೆಸರಿಟ್ಟಿದ್ದಿದ್ದರೆ ಚೆನ್ನಾಗಿರುತ್ತಿತ್ತೇನೋ , ಬಿ.ಎಂ ರಸ್ತೆಯಲ್ಲಿ ಎಡಕ್ಕೆ ಕೃಷ್ಣ ಹೋಟೆಲ್, ಕೃಷ್ಣಾ ಹೋಟೆಲ್ ನ ನೇರಕ್ಕೆ , ಬಿ.ಎಂ ರಸ್ತೆಯಲ್ಲಿ ಬಲಕ್ಕೆ ಹೊರಳಿದರೆ "ಸಂಪಿಗೆ ರಸ್ತೆ" .ಇಲ್ಲಿಂದ ಪ್ರಾರಂಭಗೊಂಡು ರವೀಂದ್ರನಗರದಲ್ಲಿ ಕೊನೆಗೊಳ್ಳುವ ಈ ರಸ್ತೆಯುದ್ದಕ್ಕೂ ಆಸ್ಪತ್ರೆಗಳ ಕಾರುಬಾರು.

ಹೆಬ್ಬಾರ್ ಕ್ಲಿನಿಕ್ ನಿಂದ ಮೊದಲುಗೊಂಡು , ಮುಂದಕ್ಕೆ ಮಂಗಳಾ ನರ್ಸಿಂಗ್ ಹೋಮ್ , ಕೊಂಚ ಬಲಕ್ಕೆ ಹೊರಳಿದರೆ ಜನತಾ ಆಸ್ಪತ್ರೆ, ಭಾಸ್ಕರ್ ಶಾಪ್, ಇನ್ನು ಮುಂದಕ್ಕೆ ಎಡಗಡೆಗೆ ವಾಸನ್ ಐ ಕೇರ್ , ನಂತರ ಮಣಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ , ಇನ್ನೂ ಮುಂದಕ್ಕೆ ಸಂಜೀವಿನಿ ಆಸ್ಪತ್ರೆ. ಹೀಗೆ ಆಸ್ಪತ್ರೆಗಳ ಸಾಲು ಸಾಲು. 

ಬಿ.ಎಂ ರಸ್ತೆಯ ಕೃಷ್ಣಾ ಹೋಟೆಲ್ ನಿಂದ ಕೊಂಚ ಮುಂದಕ್ಕೆ ಬಂದು ,ಕ್ವಾಲಿಟಿ ಬಾರ್ ಗೆ ನೇರವಾಗಿ , ಬಲಕ್ಕೆ ತಿರುಗಿದರೆ , "ಶಂಕರಮಠ ರಸ್ತೆ " ಯಾಗಿ ಶುರುವಾಗುವ ಈ ರಸ್ತೆಯುದ್ದಕ್ಕೂ ಸಾಲು ಸಾಲು ಕಲ್ಯಾಣ ಮಂಟಪಗಳು.
 
ಎಸ್. ಆರ್. ಎಸ್ ಕಲ್ಯಾಣ ಮಂಟಪದಿಂದ ಪ್ರಾರಂಭವಾಗಿ ಮುಂದೆ ಶಂಕರಮಠ ,ಬಲಕ್ಕೆ ವೆಂಕಟಾದ್ರಿ , ಇನ್ನೂ ಮುಂದಕ್ಕೆ ದೊಡ್ಡಿ ರೋಡ್ ಸರ್ಕಲ್ ನಲ್ಲಿ , ಎಂ.ಜಿ ರೋಡ್ ಎಂದು ಹೆಸರು ಬದಲಿಸಿಕೊಂಡು , ಎಂ. ಜಿ ರೋಡ್ ನ ಪ್ರಾರಂಭದಲ್ಲಿ ಆದಿ ಚುಂಚನಗಿರಿ , ಅದರ ಎದುರಿಗೆ ಗುರು ರಾಘವೇಂದ್ರ ಕಲ್ಯಾಣ ಮಂಟಪ ,ಪಕ್ಕಕ್ಕೆ ಮಹಾವೀರ ಭವನ , ಅದರ ಎದುರಿಗೆ ಗಂಗಾ ಭವನ , ಎಂ .ಜಿ ರಸ್ತೆಯಲ್ಲೇ ಹಾಗೇ ಮುಂದುವರೆದು , ಸ್ಟೇಡಿಯಂ ಬಳಿ ಇರುವ ಐಶ್ವರ್ಯ ಕನ್ವೆಂಕ್ಷನ್ ಹಾಲ್ ದಾಟಿ , ವಿದ್ಯಾನಗರದ ರಿಂಗ್ ರೋಡ್ ಬಳಿ ಇರುವ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದ ಬಳಿ ಕೊನೆಗೊಳ್ಳುತ್ತದೆ.

ಒಂದಾ, ಎರಡಾ... ಸಾಲು ಸಾಲು ಆಸ್ಪತ್ರೆಗಳು , ಸಾಲು ಸಾಲು ಕಲ್ಯಾಣ ಮಂಟಪಗಳು ಅಕ್ಕ ಪಕ್ಕದ ರಸ್ತೆಗಳಲ್ಲಿ.

ಈ ಎಂ .ಜಿ ರಸ್ತೆ ಬೆಂಗಳೂರಿನ ಎಂ .ಜಿ ರೋಡಿನಷ್ಟು ಫೇಮಸ್ ಅಲ್ಲದಿದ್ದರೂ , ಹಾಸನದ ಮಟ್ಟಿಗೆ , ಅದರಲ್ಲೂ ಕಾಲೇಜು ಹುಡುಗ ಹುಡುಗಿಯರಿಗೆ ಫೇವರೇಟ್ ಸ್ಪಾಟ್.

ಪ್ರತಿನಿತ್ಯ ಸಂಜೆ , ಇಲ್ಲಿಗೆ ಒಂದು ವಿಸಿಟ್ ಕೊಟ್ಟು , ಅಲ್ಲೇ ರಸ್ತೆ ಬದಿಯ ಗೋಬಿಯೋ , ಪವಿತ್ರ ಫಾಸ್ಟ್ ಫುಡ್ ನಲ್ಲಿ ಜ್ಯೂಸೋ ಕುಡಿದು, ಅಲ್ಲೇ ಕೊಂಚ ಬಲಕ್ಕೆ ಇದ್ದೂ ಇಲ್ಲದಂತಿದ್ದ, ಡೇ ಲೈಟ್ ನಲ್ಲಿ ಸಿಗರೇಟ್ ಸೇದದಿದ್ದರೆ ಹುಡುಗರ ಕಾಲೇಜು ಲೈಫ್ ವ್ಯರ್ಥವೆಂದೇ ಅರ್ಥ.

ಅದರಲ್ಲೂ , ಈ ಗುರುವಾರದಂದು , ರಾಯರ ಸನ್ನಿಧಿಯ ನೆಪಕ್ಕಾದರೂ ಹುಡುಗಿಯರು ಈ ರಸ್ತೆಗೆ ಬರುವುದು ಸಂಪ್ರದಾಯವಾಗಿಬಿಟ್ಟಿತ್ತು.

ಕೈಯ್ಯಲ್ಲಿ ದುಡ್ಡು ಇರಲಿ, ಬಿಡಲಿ ದಿನಕ್ಕೆ ಒಮ್ಮೆಯಾದರೂ ಎಂ.ಜಿ ರಸ್ತೆ ಸುತ್ತಿ ಬರದಿದ್ದರೆ ಮನಸ್ಸಿಗೆ ಸಮಾಧಾನವೇ ಆಗುತ್ತಿರಲಿಲ್ಲ.

ಈ ರಸ್ತೆಗಳ ಬಗ್ಗೆ ನಮ್ಮ ನಮ್ಮಲ್ಲೇ ಒಂದು ಜೋಕ್ ಹುಟ್ಟಿಕೊಂಡಿತ್ತು , " ಅಲ್ಲೇ ಶಂಕರಮಠದಲ್ಲೋ , ಎಸ್.ಆರ್.ಎಸ್ ಅಲ್ಲೋ ಮದುವೆ ಮಾಡಿಕೊಂಡು , ಹಂಗೆ ಮುಂದೆ ಬಂದು , ಎಂ.ಜಿ ರೋಡಲ್ಲಿ ಪಾನಿಪುರಿ ತಿಂದು , ಪವಿತ್ರದಲ್ಲಿ ಜ್ಯೂಸ್ ಕುಡಿದು , ಕೈ ಕೈ ಹಿಡಿದು ಒಂದು ರೌಂಡ್ ಆ ಮೂಲೆ ತನಕ ಹೋಗಿ, ವಾಪಸ್ ಹೋಗ್ತಾ , ಸಂಪಿಗೆ ರಸ್ತೆಯ ಮಣಿ ಆಸ್ಪತ್ರೆಲೋ , ಮಂಗಳಾ ನರ್ಸಿಂಗ್ ಹೋಮಲ್ಲೋ , ಹೆರಿಗೆ ಮಾಡಿಸಿಕೊಂಡು , ಮಕ್ಕಳನ್ನೂ ಜೊತೆಗೆ ಕರೆದುಕೊಂಡು ಮನೆಗೆ ಹೋಗಬಹುದು ", ಎಂದು.

ಕೈಯ್ಯಲ್ಲಿ ದುಡ್ಡಿದ್ದಾಗ ಸ್ವರ್ಗವಾಗಿದ್ದ ಎಂ.ಜಿ ರೋಡು , ದುಡ್ಡಿಲ್ಲದಿದ್ದಾಗಲೂ ಆ ಕಲ್ಯಾಣ ಮಂಟಪಗಳ ದಯೆಯಿಂದ ಒಂದು ರೀತಿಯ ವರದಾನವಾಗಿತ್ತು.

" ನಮ್ ಫ್ರೆಂಡ್ ಮದುವೆಯೊಂದಿದೆ , ಇಲ್ಲೇ ಅನ್ನಪೂರ್ಣೇಶ್ವರಿ ಚೌಟ್ರಿಲಿ , ಊಟ ಮಾಡಿಕೊಂಡು ಬರ್ತಿವಿ ", ಎಂದು ಈ ಕಲ್ಯಾಣ ಮಂಟಪಗಳ ಬಿಟ್ಟಿ ಊಟಕ್ಕೆ ಅಡಿಪಾಯ ಹಾಕಿದವರೇ ನಮ್ಮ ಗಣೇಶ, ತೇಜೇಶ್.

ಮೊದಮೊದಲು ಯಾರದ್ದೋ ಪರಿಚಿತರ ಮದುವೆಯೇನೋ ಎಂದು ಸುಮ್ಮನಾಗುತ್ತಿದ್ದ ನಾನು , ಇವರು ವಾರಕ್ಕೆ ಮೂರು ದಿನ , ಮದುವೆ ಊಟ ಮಾಡುವುದನ್ನು ನೋಡಿ , ಒಮ್ಮೆ , " ಏನ್ ಯಾವಾಗ್ಲೂ ಅವರ ಮದುವೆ , ಇವರ ಮದುವೆ ಅಂತ ಹೋಗ್ತೀರಲ್ಲಾ , ನಿಮ್ಮ ಕಡೆ ಪ್ರತೀ ವಾರ ಅಷ್ಟೊಂದು ಮದುವೆ ನಡಿಯುತ್ತಾ ", ಎಂದು ಕೇಳಿಯೇ ಬಿಟ್ಟೆ.

" ಬರೀ ನಮ್ ಕಡೇದೇನು .. ನೀನು ಬಂದರೆ ನಿಮ್ ಕಡೇ ಮದುವೆನೂ , ವಾರ ವಾರ ನಡಿಯುತ್ತೆ , ಬೇಕಾದ್ರೆ ನಾಳೆ ಬಾ", ಎಂದ ಗಣೇಶ.

" ಅಯ್ಯೋ ನನ್ಮಕ್ಳಾ , ಯಾರ್ಯಾರ್ದೋ ಮದುವೆಗೆ ಹೋಗಿ ನಮ್ ಕಡೆದು ಅಂತೀರಲ್ಲೋ", ಎಂದೆ.

" ಅಲ್ಲಿಗೆ ಹೋಗೋ ತನಕ ಯಾರ್ಯಾರ್ದೋ ಅಷ್ಟೇ , ಆಮೇಲೆ , ನಮ್ ರವಿದೋ , ನಮ್ ರೂಪಂದೋ ಆಗಿಬಿಡುತ್ತೆ , ನೀನು ಬಾ ", ಎಂದ ತೇಜೇಶ್.

ಹೀಗೆ ನಮ್ ಹರ್ಷಿ ಮದುವೆ , ನಮ್ ಸಂತು ಮದುವೆ , ಎಂದು ಪ್ರಾರಂಭವಾದ ಮದುವೆ ಊಟಗಳು , ಮುಗಿದದ್ದು ಮಾತ್ರ ನಾವು ಊರು ಬಿಟ್ಟು ಬಂದ ಮೇಲೆಯೇ.

ಮೊದಮೊದಲು ಭಯ ಪಡುತ್ತಿದ್ದ ನನಗೆ ಧೈರ್ಯ ತುಂಬಿದವರೇ ಅವರಿಬ್ಬರು , ಅಷ್ಟರಲ್ಲಾಗಲೇ ಅವರು ಎಕ್ಸ್ ಪರ್ಟ್ಸ್ ಆಗಿದ್ದರು , ನಾನಿನ್ನೂ ಬಿಗಿನರ್ ಆಗಿದ್ದೆ.

ಕೆಲವೊಮ್ಮೆ ಮದುವೆಯ ಸಭಾಗೃಹಕ್ಕೆ ಸುಮ್ಮನೆ ನಾಮ್ ಕೇ ವಾಸ್ತೆ ಹೋಗಿ , ಸ್ವಲ್ಪ ಹೊತ್ತು ಕುಳಿತಿದ್ದು ಊಟಕ್ಕೆ ಹೋದರೆ , ಕೆಲವೊಮ್ಮೆ ನೇರವಾಗಿ ಊಟದ ಗೃಹಕ್ಕೆ ಹೋಗಿ ಅಲ್ಲಿಂದಲೇ ಹೊರಬೀಳುತ್ತಿದ್ದೆವು.

ಆ ರಸ್ತೆಯಲ್ಲಿ ಅಷ್ಟೆಲ್ಲಾ ಕಲ್ಯಾಣ ಮಂಟಪಗಳಿದ್ದರೂ , ನಮ್ಮ ಮೊದಲನೇ ಆಯ್ಕೆ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪವೇ, ಏಕೆಂದರೆ , ಅಲ್ಲಿದ್ದ ಎಲ್ಲಾ ಕಲ್ಯಾಣ ಮಂಟಪಗಳ ಪೈಕಿ ವೈಭವವಾದ ಹಾಗೂ ದೊಡ್ಡ ಮಂಟಪ ಇದೊಂದೇ. ಅದಕ್ಕಿಂತ ಹೆಚ್ಚಾಗಿ ಒಳ್ಳೆಯ ಊಟ ಸಿಗುತ್ತದೆ ಎಂಬ ಆಸೆ. ನಿಜಕ್ಕೂ ಅವಳು ಅನ್ನಪೂರ್ಣೇಶ್ವರಿಯೇ , ನಮ್ಮ ಆಸೆಗೆ ಎಂದೂ ತಣ್ಣೀರೆರಚಿದವಳಲ್ಲ.

ಮಾಡುವುದೇ ಬಿಟ್ಟಿ ಊಟ ಅದರಲ್ಲೂ ಛಾಯ್ಸ್ ಬೇರೆ ಇವರಿಗೆ ಎಂದುಕೊಂಡೀರಾ..

" ಹೇಗಿದ್ರೂ ಬಿಟ್ಟಿ ಊಟ , ಮಾಡೋದು ಮಾಡ್ತೀವಿ , ಚೆನ್ನಾಗಿರೋ ಕಡೇನೇ ಮಾಡೋಣ ", ಎನ್ನುವುದು ನಮ್ಮ ವಾದ.

ಮನೆಯಲ್ಲಿ ಅಡಿಗೆ ಮಾಡಿದ್ದರೂ, ಎಲ್ಲರ ಮನೆ ಬೇರೆ ಬೇರೆ ಬಳಿ ಇದ್ದಿದ್ದರಿಂದ, " ಮನೆಗೆ ಯಾರ್ ಹೋಗ್ತಾ
ರೆ, ಇಲ್ಲೆ ಎಲ್ಲಾದ್ರು ಊಟ ಮಾಡಿ, ಸಂಜೆ ತನಕ ಸುತ್ತಾಡಿ ಹೋದರಾಯಿತು ", ಎಂಬ ಅಸಡ್ಡೆ.

ಈ ಸಂಭ್ರಮಕ್ಕೆಲ್ಲಾ ಕಡಿವಾಣ ಬೀಳುತ್ತಿದ್ದದ್ದು , ಮಂಗಳವಾರ ಮತ್ತು ಶನಿವಾರ , ಯಾಕಂದ್ರೆ ಅವತ್ತ್ಯಾರು ಮದುವೆ ಮಾಡಲ್ಲ ನೋಡಿ.

ನಮ್ಮ ಇಷ್ಟೆಲ್ಲಾ ಕುಚೇಷ್ಟೆಗಳನ್ನು , ನೋಡಿಯೂ ನೋಡದಂತಿದ್ದಿದ್ದು ನಮ್ಮ ತೇಜೇಶನ ಸ್ಯಾಮ್ ಸಂಗ್ ಟ್ಯಾಬು .

ನಮ್ಮ ಎಲ್ಲಾ ಬಿಟ್ಟಿ ಊಟದ ಯುದ್ದಗಳಿಗೂ ಉಪಯೋಗಿಸುತ್ತಿದ್ದದ್ದು ಅದೊಂದೇ ಅಸ್ತ್ರವನ್ನು , ಪುಟ್ಟ ಸ್ಲೇಟಿನಂತಿದ್ದ ಆ ಟ್ಯಾಬನ್ನು ಕೈಯ್ಯಲ್ಲಿ ಹಿಡಿದು ಹೋದರೆ ಜನ ಮರ್ಯಾದೆ ಕೊಡುತ್ತಾರೆಂಬ ಹುಸಿ ನಂಬಿಕೆ.

ಮರ್ಯಾದೆ ಕೊಡಲಿ , ಬಿಡಲಿ , ಅನುಮಾನಿಸಿ ನಮಗೆ ಥಳಿಸುವುದಿಲ್ಲವೆಂಬ ಧೈರ್ಯ ಅಷ್ಟೆ. ಟ್ಯಾಬಿನ ದಯೆಯಿಂದಲೋ ಏನೋ ಇವತ್ತಿನ ವರೆಗೆ ಯಾರೂ ಥಳಿಸಿಲ್ಲ ಎಂಬುದೇ ಸಂತೋಷದ ಸಂಗತಿ.

ಆದರೆ , ಇದುವರೆಗೂ ಹೋಗಿರುವ ಯಾವ ಮದುವೆಯಲ್ಲೂ , ವಧು ವರರಿಗೆ ಶುಭಾಶಯ ಕೋರಿಲ್ಲ ಎಂಬುದೇ ದುಃಖದ ಸಂಗತಿ. ಶುಭಾಶಯ ಇರಲಿ, ಕೆಲವರ ಮುಖವೇ ನೋಡಿಲ್ಲದ್ದು ವಿಪರ್ಯಾಸವೇ ಸರಿ.

ದೊಡ್ಡವರು ಒಂದು ಮಾತು ಹೇಳುತ್ತಾರೆ , " ನಾವು ತಿನ್ನುವ ಪ್ರತಿ ಅನ್ನದ ಅಗುಳಿನ ಮೇಲೆ ನಮ್ಮ ಹೆಸರು ಬರೆದಿರುತ್ತದೆ ", ಅಂತ .

ಅನ್ನದ ಅಗುಳಿನ ಮೇಲೆ ನಮ್ಮ ಹೆಸರು ಬರೆದಿತ್ತೋ , ಇಲ್ಲವೋ ಗೊತ್ತಿಲ್ಲ , ಆದರೆ ನಮ್ಮ ಕಷ್ಟಕಾಲದಲ್ಲಿ ನಮ್ಮ ಹೊಟ್ಟೆ ತುಂಬಿಸಿದ ಆ ಜೋಡಿಗಳ ಸಂಸಾರ ಸುಖವಾಗಿರಲಿ ಎಂಬುದೇ ನಮ್ಮ ಆಶಯ.


"ಅದೇನೇ ಆಗಲಿ ,ಈಗ್ಲೂ ಎಂ.ಜಿ ರೋಡ್ ಗೆ ಹೋದ್ರೆ, ಅದೂ ಊಟದ ಟೈಮ್ ಏನಾದ್ರೂ ಆಗಿದ್ರೆ ,ಮೊದಲು ನಮ್ಮ ಬಾಯಿಂದ ಬರೋದು , ನಡಿರೋ ಅನ್ನಪೂರ್ಣೇಶ್ವರಿಗೆ ಹೋಗಣಾ", ಅಂತಾನೆ.

                                                                                                                                                                                  - ಫಣೀಶ್ ದುದ್ದ




ಗುರುವಾರ, ಜೂನ್ 16, 2016

ಭಾವನಾ ತರಂಗ ...


ಭಾವನಾ ತರಂಗ ...



ಬೆಳಿಗ್ಗೆ ಎಂಟು ಗಂಟೆ, ಶನಿವಾರ, ಆಫೀಸಿಗೆ ರಜೆ ಬೇರೆ.. ನಿಧಾನವಾಗಿ ಏಳೋಣವೆಂದರೆ ಅದೇಕೋ ನಿದ್ರಾ ದೇವಿಗೆ ನನ್ನ ಮೇಲೆ ಸಿಟ್ಟು .. ಹೋಗಲಿ ಎಲ್ಲಾದರೂ ಹೊರಗೆ ಹೋಗೋಣವೆಂದುಕೊಂಡು ಎದ್ದು ಮನೆಯ ಬಾಗಿಲು ತೆಗೆದೆ.
 
ನಾವಿರುವ ಮನೆ ಮೊದಲನೆಯ ಮಹಡಿಯ ಮನೆ,ಒಂದು ವಾರದ ಹಿಂದೆಯಷ್ಟೇ ಈ ಮನೆಗೆ ಬಂದಿದ್ದರಿಂದ ಇದು ಮೊದಲ ವೀಕೆಂಡ್. ಪ್ರತಿ ದಿನ ಆಫೀಸಿಗೆ ಹೋಗುವ ಅವಸರದಲ್ಲಿ ಅಕ್ಕ ಪಕ್ಕ ಮನೆಗಳಲ್ಲಿ ಯಾರಿದ್ದಾರೆ ಎಂದು ತಿಳಿಯುವುದಕ್ಕೂ ಸಮಯ ಇಲ್ಲದಿದ್ದರಿಂದ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಇಂದು ಬಾಗಿಲು ತೆಗೆದೊಡನೆ ಅದೇಕೋ ನನ್ನ ದೃಷ್ಟಿ ಪಕ್ಕದ ಮನೆಯ ಮಹಡಿಯ ಮೇಲೆ ಬಿತ್ತು.

ಅದೊಂದು ತೀರ ಹಳೆಯದೂ ಅಲ್ಲದೆ, ಹಾಗೆ ಹೊಸದೂ ಅಲ್ಲದ ಮಧ್ಯಮ ವರ್ಗದ ಶೈಲಿಯ ರೆಡ್ ಆಕ್ಸೈಡ್ ನೆಲದ ಮನೆ. ಮನೆಯ ಮುಂದೊಂದು ಪುಟ್ಟ ತುಳಸೀ ಕಟ್ಟೆ, ಸಂಪ್ರದಾಯದಂತೆ ತುಳಸಿ ಕಟ್ಟೆಯ ಸುತ್ತ ರಂಗೋಲಿ,ಪಕ್ಕದಲ್ಲಿ ಮಹಡಿಯ ಮೆಟ್ಟಿಲು, ಮಹಡಿಯ ಮೇಲೆ ಕುಂಡಗಳಲ್ಲಿ ಹತ್ತಾರು ಹೂವಿನ ಗಿಡಗಳು... ನಗರ ಪ್ರದೇಶಗಳಲ್ಲಿ ಈ ರೀತಿ ಮಹಡಿಯ ಮೇಲೆ ಹೂವಿನ ಗಿಡಗಳನ್ನು ಬೆಳೆಯುವುದು ಸರ್ವೇ ಸಾಮನ್ಯವಾಗಿದೆ,ಆದರೂ ಇದೆಲ್ಲದರ ಮಧ್ಯೆ ನನ್ನ ಗಮನ ಸೆಳೆದದ್ದು ಆ ಮಹಡಿಯ ಮೇಲಿದ್ದ ಅಜ್ಜಿ.....

ಅಜ್ಜಿಯಲ್ಲೇನು ವಿಶೇಷ,ಗಿಡಗಳಿಗೆ ನೀರು ಹಾಕಲೋ... ಸಮಯ ಕಳೆಯಲೋ ಬಂದಿರಬಹುದು ಅಂದರೆ, ಒಂದರ್ಥದಲ್ಲಿ ಸರಿ...ಆದರೆ ಅದಕ್ಕಿಂತ ಹೆಚ್ಚಿನ ವಿಶೇಷವೆಂದರೆ ಅಜ್ಜಿಯು ಆ ಗಿಡಗಳ ಜೊತೆ ಮಾತನಾಡುತ್ತಿದ್ದುದ್ದು.....

ಮೊದಲ ಬಾರಿಗೆ ಗಮನಿಸಿದಾಗ ಶ್ಲೊಕಗಳನ್ನೋ... ಹಾಡನೋ.. ಹೇಳಿಕೊಳ್ಳುತ್ತಿರಬಹುದು ಎನ್ನಿಸಿತು... ಆದರೆ ಸರಿಯಾಗಿ ಗಮನಿಸಿದಾಗಲೆ ಗೊತ್ತಾಗಿದ್ದು.. ಅಜ್ಜಿ ಗಿಡಗಳೊಡನೆ ಮಾತನಾಡುತ್ತಿದ್ದಾರೆ ಎಂದು...
 
ನಾನು ಹಾಗೇ ನೋಡುತ್ತಾ,ಅವರೇನು ಮಾತನಾಡುತ್ತಿದ್ದಾರೆ ಎಂದು ತಿಳಿಯಲು ಕುತೂಹಲದಿಂದ ಅವರೆಡೆಗೆ ಕಿವಿಯಿಟ್ಟು ಆಲಿಸತೊಡಗಿದೆ...

ಆ ಹೂ ಕುಂಡಗಳ ಮಧ್ಯದಲ್ಲೊಂದು ಗುಲಾಬಿ ಗಿಡ, ಗಿಡದಲ್ಲೆರಡು ಹೂವು...ಒಂದು ದೊಡ್ಡದಾಗಿ ಅರಳಿ ನಿಂತಿದೆ.... ಇನ್ನೊಂದು ಈಗಷ್ಟೇ ಅರಳುತ್ತಿರುವ ಪುಟ್ಟ ಮೊಗ್ಗು..

ಆ ಪುಟ್ಟ ಮೊಗ್ಗನ್ನು ನೋಡುತ್ತಾ..
" ನೀನು ಹೀಗೆ ಇದ್ದಿಯಾ..?? ನಿಮ್ಮಪ್ಪ ಫೊನ್ ಮಾಡಿ ನನಗೊಬ್ಬ ಗಂಡು ಮಗ ಹುಟ್ಟಿದ ಅಂತ ಹೇಳಿದ್ದೇ ಕೊನೆ... ಆಮೇಲೆ ಫೊನು ಇಲ್ಲ .. ಏನು ಇಲ್ಲ, ಮರೆತೆಬಿಟ್ಟಿದ್ದಾನೆ ನನ್ನ..",
ಆ ಮೊಗ್ಗಿನ ಮೇಲೆ ಬಿದ್ದ ಮಂಜಿನ ಹನಿಯು ಸೂರ್ಯನ ಕಿರಣಗಳಿಗೆ ಪಳ ಪಳ ಹೊಳೆಯುವುದನ್ನು ನೋಡಿ ," ನೀನೂ ಈ ಥರನೇ ನಗ್ತಾ ಇದಿಯಾ..? ನಿನ್ನ ನೋಡ್ಬೆಕು ಅಂತ ಆಸೆ ನಂಗೆ.... ನಿನ್ಗೆ ಏನು ಹೆಸರಿಟ್ಟಿದರೊ ನಂಗೊತ್ತಿಲ್ಲ್ವಲ್ಲ... ನಿನ್ನ ಏನಂತ ಕರಿಲೀ.....?? ನಿನ್ನ ಎತ್ತಿ ಮುದ್ದಾಡಬೆಕು ಅಂತ ನನಗೂ ಆಸೆ ಇದೆ .... ನಿಮ್ಮಮ್ಮಂಗೆ ನನ್ನ ಮೇಲೆ ಯಾಕಷ್ಟು ಕೊಪ ಅಂತ ಗೊತ್ತಿಲ್ಲ ....".

" ನಿಮ್ಮಪ್ಪನ್ನ ಮದುವೆ ಆದ ಮೇಲೆ ಸ್ವಲ್ಪ ದಿನ ನನ್ನ ಜೊತೆ ಚೆನ್ನಾಗೆ ಇದ್ದಳುಮೊದಲೇ ಈಗಿನ ಕಾಲದ ಹುಡುಗಿ, ನನ್ನ ಗೊಡ್ಡು ಸಂಪ್ರದಾಯ ಅವಳಿಗೆಲ್ಲಿ ಇಷ್ಟ ಆಗುತ್ತೆ .... ಆಮೇಲೆ ನಿಮ್ಮಪ್ಪ ಕೆಲಸದ ಮೇರೆಗೆ ದೂರದ ಊರಿಗೆ ಹೋದ , ಸ್ವಲ್ಪ ದಿನದ ನಂತರ ಅವಳೂ ಹೋದಳು..... ಆಮೇಲೆ ನೀನು ಹುಟ್ಟಿದೆ....ನಿನ್ನನ್ನ ನೋಡುವುದಕ್ಕೂ ಬಿಡ್ದೆ... ಮುಟ್ಟುವುದಕ್ಕೂ ಬಿಡ್ದೆ... ಈ ಮುಳ್ಳಿನ ಥರ ಇದ್ದಾಳೆ....".

" ಆಮೇಲೆ ನಿಮ್ಮಪ್ಪನೂ ನನ್ನಿಂದ ದೂರ ಆದ....ನಾನೆ ಗಿಡ ನೆಟ್ಟು .. ನೀರು ಹಾಕಿ .. ಬೆಳೆಸಿ ದೊಡ್ದದು ಮಾಡಿ ... ನೋಡು ಆ ದೊಡ್ದ ಗುಲಾಬಿ ಹೂವು .. ನಿಮ್ಮಪ್ಪನೂ ಹಾಗೆ ಅರಳಿ ನಿಂತಿದ್ದಾನೆ ...ಆದ್ರೆ ನಮ್ಮಿಬ್ಬರ ಮಧ್ಯೆ ನಿಮ್ಮಮ್ಮ ಮುಳ್ಳಾಗಿದ್ದಾಳೆ... ನಂಗೂ ವಯಸ್ಸಾಗೋಯ್ತು , ಸಾಯೋದ್ರೊಳ್ಗೆ ನಿನಗೆ ಒಂದೆ ಒಂದು ಸಲ ಮುತ್ತಿಟ್ಟು ಸಾಯಬೇಕು ಅಂತ ಆಸೆ" ಅಂದರು.

ಅದನ್ನು ಕೇಳಿದಾಕ್ಷಣ ಒಮ್ಮೆಲೆ ಬೇಸರ ಮತ್ತು ಆಶ್ಚರ್ಯ ಒಟ್ಟಿಗೇ ಆಯಿತು.

ಅಜ್ಜಿ ಆ ದೊಡ್ದ ಗುಲಾಬಿ ಹೂವನ್ನು ನೋಡುತ್ತಾ , " ನಿನ್ನ ಹೆಂಡತಿ ಇರಲಿ,ನೀನಾದ್ರು ಒಂದು ಸಲ ಬಂದು ಹೋಗೋ...ನಿನ್ನ ಮಗನ್ನ ಕರೆದುಕೊಂಡು ಬಾರೋ.... ಎಷ್ಟು ವರ್ಷ ಆಯ್ತೋ ನಿನ್ನ ನೋಡಿ ... ಮೊದ್ಲು ಮೆದ್ಲು ಫೊನ್ ಆದ್ರು ಮಾಡ್ತಿದ್ದೆ, ಈಗ ಅದು ಇಲ್ಲ ... ನಿನ್ನ ಮಗ ಹುಟ್ಟಿದ ಅಂತ ಹೇಳಿ ಆರು ತಿಂಗಳ ಹಿಂದೆ ಫೊನ್ ಮಾಡಿದ್ದು ಬಿಟ್ರೆ ಆಮೇಲೆ ಮಾಡೆ ಇಲ್ವಲ್ಲೊ... ", ಎಂದು ಆ ಹೂವನ್ನು ಮುಟ್ಟಲು ಹೋದೊಡನೆ ಜೋರಾಗಿ ಗಾಳಿ ಬೀಸಿ ಹೂವಿನ ಬುಡದಲ್ಲಿದ್ದ ಮುಳ್ಳೊಂದು ಅಜ್ಜಿಯ ಬೆರಳಿಗೆ ಚುಚ್ಚಿತು.

ಮುಳ್ಳನ್ನು ನೋಡಿ ," ನನ್ನ ಕಂಡರೆ ನಿನಗ್ಯಾಕೇ ಅಷ್ಟೊಂದು ಕೊಪ??.. ಈ ಕಡೆಗಾಲದಲ್ಲಾದ್ರು ನನ್ನ ಮಗನ್ನ , ಮೊಮ್ಮಗನ್ನ ನೋಡ್ಬೆಕು ಅನ್ನಿಸ್ತಿದೆ ಕಣೆ... ಒಂದೇ ಒಂದು ಸಲ ನನ್ನ ಮಗನ್ನು, ಮೊಮ್ಮಗನ್ನು ನನ್ನ ಹತ್ತಿರ ಕಳಿಸಿ ಕೊಡೆ ..."ಎಂದು ಕಣ್ಣೀರಿಟ್ಟರು.

ಹಾಗೇ ತಂಪಾಗಿ ಬೀಸುತ್ತಿದ್ದ ಗಾಳಿಯನ್ನು ಕುರಿತು , " ನೀನಾದ್ರು ಎಲ್ಲಾ ಊರಿಗೂ ಹೋಗ್ತಿಯ.. ನನ್ಗೆ ಈ ಫೊನು ಗೀನು ಏನು ಮಾಡಕ್ಕೆ ಬರಲ್ಲ... ನೀನಾದ್ರು ನನ್ನ ಮಾತನ್ನು ನನ್ನ ಮಗ ಸೊಸೆಗೆ ತಿಳಿಸು ... ನನ್ನ ಮೊಮ್ಮಗಂಗೆ ನಿಮ್ಮಜ್ಜಿ ಕೇಳಿದ್ಲು ಅಂತ ಹೇಳು... ಹಾಗೆ ಬಂದು ಅವರು ಏನು ಹೇಳಿದ್ರು ಅಂತನೂ ಹೇಳು ", ಎಂದು ಕುಡಿಕೆಯಲ್ಲಿದ್ದ ನೀರನ್ನು ಆ ಗುಲಾಬಿ ಗಿಡಕ್ಕೆ ಹಾಕಿ ,ನಿಧಾನವಾಗಿ ಮೆಟ್ಟಿಲನ್ನು ಇಳಿಯತೊಡಗಿದರು ....

ಅದೆಷ್ಟು ಜನರ ಭಾವನೆಗಳು ಹೀಗೆ ಗಾಳಿಯ ತರಂಗಗಳಲ್ಲೇ ಸುತ್ತುತ್ತಿವೆಯೋ ಏನೋ ನಾ ಕಾಣೆ ...


                                                                                           - ಫಣೀಶ್ ದುದ್ದ